”ಹಿರಿಯ ಚೇತನಕ್ಕೆ ನವಲಗುಂದದ ಶುಭಾಶಯ: ಬಿ.ಎಸ್.ವೈ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದ ಶಂಕರ ಪಾಟೀಲಮುನೇನಕೊಪ್ಪ”
ಶಿಕಾರಿಪುರದಲ್ಲಿ ಬಿ.ಎಸ್.ವೈ ಜನ್ಮದಿನದ ಸಂಭ್ರಮ: ಮುನೇನಕೊಪ್ಪ ಅವರಿಂದ ಗುರುವಂದನೆ
ಶಿಕಾರಿಪುರ: ನಾಡಿನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಶಿಕಾರಿಪುರದ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು.
ಶಿಕಾರಿಪುರಕ್ಕೆ ಆಗಮಿಸಿದ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಬಿ.ಎಸ್.ವೈ ಅವರ ನಿವಾಸದಲ್ಲಿ ನಡೆದ ಈ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿರದೆ, ಹಿರಿಯ ಮತ್ತು ಕಿರಿಯ ನಾಯಕರ ನಡುವಿನ ಅವಿನಾಭಾವ ಸಂಬಂಧವನ್ನು ಸಾಬೀತುಪಡಿಸಿತು.
ಹರಸಿದ ಅಪ್ಪಾಜಿ
ಬಿ.ಎಸ್.ವೈ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದ ಮುನೇನಕೊಪ್ಪ ಅವರು, ಅವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿ.ಎಸ್.ವೈ ಅವರು ಮುನೇನಕೊಪ್ಪ ಅವರ ಬೆನ್ನುತಟ್ಟಿ ಹರಸಿದರು.
ಈ ಸಂದರ್ಭದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಜೊತೆಗೆ ನವಲಗುಂದ ಕ್ಷೇತ್ರದ ಪ್ರಮುಖರಾದ ರಾಜಶೇಖರ ಕಂಪ್ಲಿ, ರೋಹಿತ ಮತ್ತಿಹಳ್ಳಿ, ಪ್ರಭು ಬುಳಗಣ್ಣನವರ, ಫಕ್ಕೀರಪ್ಪ ಚಾಕಲಬ್ಬಿ, ಶಂಭು ಮೆಣಸಿನಕಾಯಿ, ಮಂಜು ಗಡೇಣ್ಣನವರ ಹಾಗೂ ದುಂಡಪ್ಪ ಶೆಟ್ಟರ್ ಉಪಸ್ಥಿತರಿದ್ದು, ಜನನಾಯಕನಿಗೆ ತಮ್ಮ ಪ್ರೀತಿಯ ಹಾರೈಕೆಗಳನ್ನು ಸಲ್ಲಿಸಿದರು.
“ಬಿ.ಎಸ್. ಯಡಿಯೂರಪ್ಪನವರು ನಮ್ಮೆಲ್ಲರ ಶಕ್ತಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದು ನಮ್ಮ ಸೌಭಾಗ್ಯ. ಅವರು ನೂರು ಕಾಲ ಸುಖ-ಸಂತೋಷದಿಂದ ಬಾಳಿ ನಾಡಿಗೆ ಶಕ್ತಿ ತುಂಬಲಿ,” ಎಂದು ಈ ಸಂದರ್ಭದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರು ಹಾರೈಸಿದರು.
