ಬೆಳಗಾವಿಯಲ್ಲಿ ನವಲಗುಂದ ಪ್ರೇಮಿಗಳ “ಮದುವೆ”- ಬಸವರಾಜ ನಡುವಿನಮನಿ weds ಅಶ್ವಿನಿ ಮಾದರ…!!!
ಕುಟುಂಬಸ್ಥರ ವಿರೋಧದ ನಡುವೆಯೂ ಅಂಬೇಡ್ಕರ್ ಪ್ರತಿಮೆ ಎದುರು ಪ್ರೇಮಿಗಳ ವಿವಾಹ
ಬೆಳಗಾವಿ: ಮನೆಯವರ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಪ್ರೇಮ ಬಾಂಧವ್ಯವು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಸಾಕ್ಷಿಯಾಗಿ ಮದುವೆಯಾಗಿ ಮಾರ್ಪಟ್ಟಿದೆ.
ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಪ್ರೇಮಿಗಳಾದ ಬಸವರಾಜ ನಡುವಿನಮನಿ ಹಾಗೂ ಅಶ್ವಿನಿ ಮಾದರ ಅವರು ಶುಕ್ರವಾರ ಬೆಳಗಾವಿ ನಗರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯ ವಿವಾಹಕ್ಕೆ ಬಸವರಾಜ ಅವರ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮನೆಯವರ ಮನವೊಲಿಸಲು ಪ್ರಯತ್ನಿಸಿದರೂ ಸಫಲವಾಗದಿದ್ದಾಗ, ಈ ಪ್ರೇಮಿಗಳು ಸಾಮಾಜಿಕ ಸಂಘಟನೆಯ ಮೊರೆ ಹೋದರು.
ಸಂಘಟನೆಯ ಬೆಂಬಲ: ಯುವ ಕರ್ನಾಟಕ ಭೀಮಸೇನೆ ಸಂಘಟನೆಯ ನೇತೃತ್ವದಲ್ಲಿ ಇವರ ವಿವಾಹವು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಅತ್ಯಂತ ಸರಳವಾಗಿ ನಡೆಯಿತು. ಪ್ರೇಮಿಗಳು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಸಂವಿಧಾನದ ಸಾಕ್ಷಿಯಾಗಿ ಒಂದಾದರು. ಮದುವೆಯ ನಂತರ ಮಾತನಾಡಿದ ಜೋಡಿ, ತಮ್ಮ ಪ್ರೀತಿಗೆ ಬೆಂಬಲ ನೀಡಿ ವಿವಾಹ ಮಾಡಿಸಿದ ಸಂಘಟನೆಯ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದು ವಧು-ವರರನ್ನು ಹರಸಿದರು.
