ಕೇರಳದಲ್ಲಿ ಕರ್ನಾಟಕ ಪೊಲೀಸರ 3.96ಲಕ್ಷ ರೂ. “ಮಾನ”- ಇನ್ಸಪೆಕ್ಟರ್ ಸೇರಿ ನಾಲ್ವರು ಅಮಾನತ್ತು…

ಕರ್ನಾಟಕ ಪೊಲೀಸರ ಮರ್ಯಾದೆಯನ್ನ ಕೇರಳದಲ್ಲಿ ಮಾರಾಟ ಮಾಡಿದವರ ಅಮಾನತ್ತು..
ಬೆಂಗಳೂರು: ಕೇರಳ ಪೊಲೀಸರಿಂದ ವೈಟ್ ಫೀಲ್ಡ್ ಸಿಇಎನ್ ಪೊಲೀಸರ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಸಸ್ಪೆಂಡ್ ಮಾಡಿ ಪೊಲೀಸ್ ಕಮೀಷನರ್ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಅವರು ಈ ಆದೇಶ ಹೊರಡಿಸಿದ್ದಾರೆ.
ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೇಬಲ್ ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್ ಟೇಬಲ್ ಸಂದೇಶ್ ವಜಾಗೊಂಡಿರುವ ಪೊಲೀಸರಾಗಿದ್ದಾರೆ.
ಆಗಿದ್ದೇನು: ಆನ್ಲೈನ್ ವಂಚನೆ ಪ್ರಕರಣದ ಆರೋಪಿಯಿಂದ 3.96 ಲಕ್ಷ ರು. ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಬೆಂಗಳೂರಿನ ವೈಟ್ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಪೊಲೀಸರನ್ನು ಕೇರಳದ ಕೊಚ್ಚಿ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ ಘಟನೆ ನಡೆದಿತ್ತು.
ಹೊರ ರಾಜ್ಯದಲ್ಲಿನ ರಾಜ್ಯ ಪೊಲೀಸರ ಈ ಭ್ರಷ್ಟಾಚಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಲಂಚ ಸ್ವೀಕರಿಸಿದ ಕಳಂಕಕ್ಕೆ ಗುರಿಯಾದ ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ಗಳಾದ ವಿಜಯ್ಕುಮಾರ್, ಶಿವಾನಿ ಹಾಗೂ ಕಾನ್ಸ್ಟೇಬಲ್ ಸಂದೇಶ್ರನ್ನು ಗುರುವಾರ ಅಮಾನತುಗೊಳಿಸಿದ್ದಾರೆ. ಈ ಪ್ರಕರಣ ಸಂಬಂಧ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರನ್ನು ಬುಧವಾರ ರಾತ್ರಿಯೇ ಸಂಪರ್ಕಿಸಿದ್ದ ಕೊಚ್ಚಿ ಡಿಸಿಪಿ ಮಾಹಿತಿ ನೀಡಿದರು ಎನ್ನಲಾಗಿದೆ.
ಸಿಇಎನ್ ಪೊಲೀಸರು ಲಂಚ ಸ್ವೀಕರಿಸಿದ ಆರೋಪ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾದ ಆಯುಕ್ತ ಬಿ.ದಯಾನಂದ್ ಅವರು, ರಾಜ್ಯದ ಪೊಲೀಸ್ ಇಲಾಖೆಗೆ ಅಗೌರವ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಪ್ರಕರಣದ ಪ್ರಾಥಮಿಕ ಮಾಹಿತಿ ಪಡೆದ ಆಯುಕ್ತರು, ಕರ್ತವ್ಯಲೋಪದವೆಸಗಿದ ಆರೋಪದ ಮೇರೆಗೆ ಸಿಇಎನ್ ಠಾಣೆ ಪಿಐ ಹಾಗೂ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಬಳಿಕ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಆನ್ಲೈನ್ ವಂಚನೆ ಪ್ರಕರಣ ಸಂಬಂಧ ಕೇರಳ ರಾಜ್ಯದಲ್ಲಿ ಬಂಧಿಸುವ ವೇಳೆ ಆರೋಪಿತನಿಂದ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ವೈಟ್ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಪೊಲೀಸರನ್ನು ಆಯುಕ್ತರು ಅಮಾನತುಗೊಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕೊಚ್ಚಿ ಪೊಲೀಸರಿಂದ ವರದಿ ಪಡೆದು ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ.
–ರಮಣ ಗುಪ್ತ, ಹೆಚ್ಚುವರಿ ಆಯುಕ್ತ (ಪೂರ್ವ), ಬೆಂಗಳೂರು