“ಬಡವರ ಮಗ” ಬಸವರಾಜ ಕೊರವರ ಬಂಧನ… ದರದರನೇ ಎಳೆದುಕೊಂಡು ಹೋಗಿದ್ದರ ಮರ್ಮವೇನು…!?

ಧಾರವಾಡ: ಅವಳಿನಗರದ ಜನರಿಗೆ ಸಮರ್ಪಕವಾಗಿ ಕುಡಿಯಲು ನೀರು ಸಿಗುವವರೆಗೂ ಉಪವಾಸ ಹೋರಾಟ ಆರಂಭಿಸಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರನ್ನ ಸೇರಿ ಮೂರ್ನೂಕ್ಕೂ ಹೆಚ್ಚು ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಕುಡಿಯುವ ನೀರಿನ ಪೂರೈಕೆ ಹೊಣೆಗಾರಿಕೆಯನ್ನ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದ್ದರಿಂದ ನೂರಾರೂ ಬಡ ಕುಟುಂಬದವರು ಬೀದಿಗೆ ಬಿದ್ದಿದ್ದಲ್ಲದೇ ಕುಡಿಯುವ ನೀರಿನ ಸರಬರಾಜು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬಡವರ ಮಕ್ಕಳನ್ನ ಬೀದಿಗೆ ತಳ್ಳಿದ್ದಲ್ಲದೇ ನೀರನ್ನೂ ನೀಡದವರ ವಿರುದ್ಧ ಹೋರಾಟ ಆರಂಭವಾಗಿತ್ತು.
ದರದರನೇ ಎಳೆದುಕೊಂಡು ಹೋಗಿರುವ ವೀಡಿಯೋ
ಬಡವರ ಕುಟುಂಬಗಳ ಪರವಾಗಿ ‘ಬಡವರ ಮಗ’ ಎಂದೇ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು, ಕಳೆದ 36 ಗಂಟೆಯಿಂದ ಹನಿ ನೀರು ಕುಡಿಯದೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಬಂದು ಸಮಾಲೋಚನೆ ನಡೆಸಿದರೇ ಹೊರತೂ ಸಮಸ್ಯೆಯನ್ನ ಹೋಗಲಾಡಿಸಲು ಪ್ರಯತ್ನಿಸಲಿಲ್ಲ. ಇದೇ ಕಾರಣಕ್ಕೆ ಮತ್ತೆ ಹೋರಾಟದ ಕಾವು ಹೆಚ್ಚಾಗಿತ್ತು. ಹಾಗಾಗಿ, ಹೋರಾಟವನ್ನ ಹತ್ತಿಕ್ಕುವ ಉದ್ದೇಶದಿಂದ ಬಂಧನ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.