ಕನ್ನಡ ನಾಡು -ನುಡಿಯ ಸೇವೆಗೆ ಬೆಂಬಲಿಸಿ: ನಾಗರಾಜ್ ಕಿರಣಗಿ

ಧಾರವಾಡ: ಕನ್ನಡ ನಾಡು – ನುಡಿಯ ಸೇವೆಗೆ ಅವಕಾಶ ನೀಡಿ ಭ್ರಷ್ಟಾಚಾರ ಮುಕ್ತ , ಪ್ರಾಮಾಣಿಕ , ದಕ್ಷ , ಹಾಗೂ ಸಮರ್ಥ ಆಯ್ಕೆಗಾಗಿ ನನ್ನನ್ನು ಬೆಂಬಲಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ -2021 ರ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಹಲವಾರು ವರ್ಷಗಳಿಂದ ನಿಂತ ನೀರಾಗಿದೆೆ, ಮಕ್ಕಳಿಗೆ, ಯುವಕರಿಗೆ, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮತ್ತು ಮಹಿಳಾ ಸಾಹಿತ್ಯ ಪ್ರಿಯರಿಗೆ , ಸಾಹಿತಿಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕೆಲಸಗಳು ಕಂಡು ಬಂದಿಲ್ಲ . ಹೀಗಾಗಿ ವರ್ಷದ 365 ದಿನಗಳು ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನಿರಂತರವಾಗಿ ಕೆಲಸ ಮಾಡುವ ಕೇಂದ್ರವನ್ನಾಗಿಸುವ ಆಶಯ ಹೊಂದಿರುವೆ ಎಂದರು.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅಭಿಲಾಷೆಯೊಂದಿಗೆ ಯುವಕ – ಯುವತಿಯರಿಗೆ , ಮಹಿಳೆಯರಿಗೆ ಹಿರಿಯ ಸಾಹಿತಿಗಳಿಂದ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಕಥೆ , ಕವನ , ಪ್ರಬಂಧ , ಸಾಹಿತ್ಯದ ವಿವಿಧ ಮಜಲುಗಳನ್ನು ಪರಿಚಯಿಸುವ ಜೊತೆಗೆ ನವನವೀನ ಸಂವೇದನೆಯ ಹೊಸ ಸಾಹಿತ್ಯ ಹೊರಹೊಮ್ಮುವಂತೆ ಮಾಡುವ ಧೈಯವನ್ನು ಹೊಂದಿದ್ದೇನೆ . ಅದಕ್ಕಾಗಿ ಪೂರ್ಣ ಪ್ರಮಾಣದ ಅಧ್ಯಕ್ಷರ ಅವಶ್ಯಕತೆ ಇದ್ದು , ವಿವಿಧ ಶಾಲೆ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಅವಕಾಶ ನೀಡದೆ ಕನ್ನಡ ಕಟ್ಟುವ ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ಸಮರ್ಥವಾಗಿ ತೆಗೆದುಕೊಂಡು ಹೋಗಿ ತಲುಪಿಸುವ ಸದೃಢ , ಕ್ರಿಯಾಶೀಲ , ಹೃದಯವಂತ ಕನ್ನಡದ ಮನಸ್ಸು ಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮಾತನಾಡಿ, ಕಳೆದ 21 ವರ್ಷಗಳ ಕಾಲ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉದಯ ಟಿವಿ , ಈ ಟಿವಿ , ಜೀ ಕನ್ನಡ , ಸುವರ್ಣ ನ್ಯೂಸ್ , ಉದಯವಾಣಿ ವಿಜಯವಾಣಿಗಳಲ್ಲಿ ಕೆಲಸ ನಿರ್ವಹಿಸಿ ಪ್ರಜಾಕಿರಣ , ಕಾಮ್ ಮೂಲಕ ನಾಡಿನ ಉದ್ದಗಲಕ್ಕೂ ಅಪಾರ ಪ್ರಮಾಣದ ಅಭಿಮಾನಿಗಳ ಪಡೆ ಹೊಂದಿರುವ ನಾಗರಾಜ ಕಿರಣಗಿ ಈಗಾಗಲೇ ಬಾಲನಂದನ ಟ್ರಸ್ಟ್ ಮುಖಾಂತರ ನೂರಾರು ಮಕ್ಕಳಿಗೆ , ಯುವಕರಿಗೆ ಸಾಹಿತ್ಯ , ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಜೊತೆಗೆ ಶಾಲಾ ಪರಿಸರ , ಕವಳ , ಉಳವಿ , ಪಶ್ಚಿಮ ಘಟ್ಟದ ಉಳಿವಿಗೆ ಹೋರಾಡಿದ್ದಾಗಿ ಸಾಲುಮರದ ತಿಮ್ಮಕ್ಕ ಪ್ರಶಸ್ತಿ , ಗದುಗಿನ ತೋಂಟದಾರ್ಯ ಮಠದ ಲಿಂಗಾಯತ ಮಾಲಿಕೆ ಅಡಿ ಪ್ರೊ . ರಾಜಶೇಖರ ಭೂಸನೂರಮಠ ಅವರ ಜೀವನ ಕೃತಿ , ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳ ಪ್ರವಚನ ವಿಚಾರ ವಿರ್ಸಜನೆ ಕೃಷಿ ಸೇರಿ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ನಾಗರಾಜ ಅವರು ಯುವಕ – ಯುವತಿಯರಿಗೆ , ಮಹಿಳೆಯರಿಗೆ ಸಾಹಿತ್ಯ ಮತ್ತು ಸಾಹಿತ್ಯದ ಹೊರತಾಗಿಯೂ ಸಂಗೀತ , ನಾಟಕ ಸಂಸ್ಕೃತಿ ಪರಿಚಯಿಸುವ ಹತ್ತು ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶಿಷ್ಟ ಛಾಪು ಮೂಡಿಸಿದ್ದಾರೆ . ಇಂತಹ ಕನ್ನಡ ಕಟ್ಟಾಳು , ಸಾಹಿತಿ , ಮಕ್ಕಳ ಹಕ್ಕುಗಳ ಹೋರಾಟಗಾರ , ಪತ್ರಕರ್ತ , ಸಾಮಾಜಿಕ ಕಾರ್ಯಕರ್ತ ನಾಗರಾಜ ಕಿರಣಗಿ ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಕನ್ನಡ ಸೇವೆಗೆ ಅಣಿಯಾಗಿ ಆಶೀರ್ವಾದಿಸಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಗಂಗಣ್ಣವರ, ನಾರಾಯಣ ಭಜಂತ್ರಿ, ಬಸವರಾಜ್ ಕೊರವರ, ಮಂಜುನಾಥ ಹೆಗಡೆ ಇದ್ದರು.