ರಸ್ತೆಯಲ್ಲೇ ಪೊಲೀಸರಿಗೆ ಧರ್ಮದೇಟು.. ಪೊಲೀಸ್ ವಾಹನ ಉಡೀಸ್…!

ಮೈಸೂರು: ಕರ್ತವ್ಯ ಪಾಲನೆ ಮಾಡುವಾಗ ಓಡಿ ಹೋಗಿ ಬೈಕ್ ಸವಾರನನ್ನ ಹಿಡಿಯಲು ಹೋದಾಗ, ಬೈಕ್ ಸವಾರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸರನ್ನ ಹಿಗ್ಗಾಮುಗ್ಗಾ ಥಳಿಸಿ, ವಾಹನವನ್ನ ಜಖಂ ಮಾಡಿದ ಘಟನೆ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹಿನಕಲ್ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ.
ಮೂಲತಃ ಎಚ್.ಡಿ. ಕೋಟೆ ನಿವಾಸಿಯಾದ ಸಿವಿಲ್ ಇಂಜಿನಿಯರ್ ದೇವರಾಜು (46) ಪೊಲೀಸರ ಯಡವಟ್ಟಿಗೆ ಬಲಿಯಾಗಿದ್ದು, ಮೃತನಿಗೆ ಎರಡು ಚಿಕ್ಕಮಕ್ಕಳಿವೆ.
ಬೈಕ್ ಸವಾರನನ್ನು ತಪಾಸಣೆ ನಡೆಸಲು ಮುಂದಾದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಕೆಳಬಿದ್ದ ವೇಳೆಯಲ್ಲಿ ಹಿಂಬದಿಯಿಂದ ಬಂದ ವ್ಯಾನ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಎಎಸ್ಐ ಮಾದೇಗೌಡ ಹಾಗೂ ಪೇದೆಯನ್ನ ಮನಬಂದಂತೆ ಜನರು ಥಳಿಸಲು ಮುಂದಾದಾಗ, ಜನರಿಂದ ಪೊಲೀಸರಿಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಘಟನಾ ಸ್ಥಳದಲ್ಲಿ ಲಾಠಿಚಾರ್ಜ ನಡೆಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.