ಆರೇಕುರಹಟ್ಟಿಯಲ್ಲಿ ಮನೆಗೆ ನುಗ್ಗಿದ “ಮರಳು” ಲಾರಿ…!

ಧಾರವಾಡ: ಮರಳು ತುಂಬಿದ ಲಾರಿಯೊಂದು ವೇಗವಾಗಿ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆಯ ರಂಗನಗೌಡ ಪಾಟೀಲ ಎಂಬುವವರಿಗೆ ಸೇರಿದ ಮರಳು ತುಂಬಿದ ಲಾರಿಯು, ಹುಬ್ಬಳ್ಳಿಯತ್ತ ಬರುತ್ತಿದ್ದಾಗ ದುರ್ಘಟನೆ ನಡೆದಿದ್ದು, ಮನೆಯ ಗೋಡೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ನವಲಗುಂದ ಠಾಣೆ ಪೊಲೀಸರು ಚಾಲಕನನ್ನ ವಶಕ್ಕೆ ಪಡೆದು, ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಚಾಲಕನ ನಿರ್ಲಕ್ಷ್ಯತನದಿಂದಲೇ ಘಟನೆ ನಡೆದಿದ್ದು, ಮನೆಯ ಗೋಡೆ ಬಳಿಯೇ ಲಾರಿ ನಿಂತಿದೆ.
ನಿಗದಿತ ಮರಳು ಸಾಗಾಟ ಮಾಡದೇ, ಹೆಚ್ಚು ಟನ್ ಮರಳು ಸಾಗಾಟ ಮಾಡುವುದನ್ನ ರೂಢಿಸಿಕೊಂಡಿರುವ ಅಕ್ರಮ ಮರಳುಕೋರರು, ಹಣಕ್ಕಾಗಿ ಬೇಗನೇ ತಲುಪಿ, ಅದೇ ಪಾಸಿನಲ್ಲಿ ಮತ್ತೊಂದು ಟ್ರೀಪ್ ಹೊಡೆಯುವುದಕ್ಕೆ ವೇಗವಾಗಿ ವಾಹನಗಳನ್ನ ಚಲಾಯಿಸುವಾಗ ಇಂತಹ ಘಟನೆಗಳು ನಡೆಯುತ್ತವೆ.