ಭಗವಾನ್ ಮುಖಕ್ಕೆ ಕಪ್ಪು ಮಸಿ: ಬೆಂಗಳೂರು ವಕೀಲರ ಸಂಘದ ಖಂಡನೆ

ಬೆಂಗಳೂರು: ನಗರದ ಮಾಜಿಸ್ಟ್ರೇಟ್ ಕೋರ್ಟಗೆ ಹಾಜರಾಗಲು ಬಂದಿದ್ದ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಪ್ರಕರಣವನ್ನ ಬೆಂಗಳೂರು ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.
ಸಾಹಿತಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ವಕೀಲರಾದ ಮೀರಾ ರಾಘವೇಂದ್ರ ಮಸಿ ಬಳಿದಿದ್ದನ್ನ ವಕೀಲರ ಸಂಘ ಖಂಡಿಸಿದೆ. ಅಷ್ಟೇ ಅಲ್ಲ, ಮೀರಾ ರಾಘವೇಂದ್ರ ಅವರು ಬೆಂಗಳೂರು ವಕೀಲರ ಸಂಘದ ಸದಸ್ಯರು ಅಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರಕಟನೆ ಹೊರಡಿಸಿರುವ ವಕೀಲರ ಸಂಘ, ಮೀರಾ ರಾಘವೇಂದ್ರ ಅವರ ಕೃತ್ಯದಿಂದ ವಕೀಲ ವೃತ್ತಿಗೆ ಕಪ್ಪು ಚುಕ್ಕೆಯಾಗಿದೆ. ಬೆಂಗಳೂರು ವಕೀಲರ ಸಂಘವು ನ್ಯಾಯಾಂಗದ ಗೌರವವನ್ನ ಕಾಪಾಡುವಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಜಾಂಚಿಯಾಗಿರುವ ಶಿವಮೂರ್ತಿ ತಿಳಿಸಿದ್ದಾರೆ.