ಪ್ರಭಾಕರ ಕೋರೆ ಸ್ವಾಮಿಗಳನ್ನ ಬ್ಲ್ಯಾಕ್ ಮೇಲ್ ಮಾಡಿ, ಆಸ್ತಿ ಹೊಡಿಯೋ ಪ್ರಯತ್ನ ಮಾಡ್ತಿದ್ದಾರಾ… !

ಹುಬ್ಬಳ್ಳಿ: ಮಠಕ್ಕೆ ಸ್ವಾಮಿಗಳನ್ನ ಮಾಡುವುದು ಗೊತ್ತು, ತೆಗೆಯುವುದು ಗೊತ್ತು ಎಂದು ಹೇಳುವ ಮೂಲಕ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆಯವರು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಮಠದ ಆಸ್ತಿಯನ್ನ ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರಾ ಎಂದು ವೀರಶೈವ-ಲಿಂಗಾಯತ ಮುಖಂಡ ಅನಿಲಕುಮಾರ ಪಾಟೀಲ ಕಿಡಿಕಾರಿದ್ದಾರೆ.
ಮೂರುಸಾವಿರ ಮಠದ ಆಸ್ತಿಯನ್ನ ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದೆಂದು ಸುಪ್ರೀಂಕೋರ್ಟಿನ ಆದೇಶವಿದ್ದರೂ ಹೀಗೆ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಮಠದ ಆಸ್ತಿಯನ್ನ ಕೆಎಲ್ಇಗೆ ಕೊಡುವ ಮಾತೇ ಇಲ್ಲ. ಮಠದ ಆಸ್ತಿಯನ್ನ ಮರಳಿಸಬೇಕೆಂದು ಅನಿಲಕುಮಾರ ಪಾಟೀಲ ಒತ್ತಾಯಿಸಿದರು.
ಇದೇ ಕಾರಣಕ್ಕಾಗಿ ವೀರಶೈವ-ಲಿಂಗಾಯತರ ಸಭೆಯನ್ನ ಕರೆದು ಹೋರಾಟ ಮಾಡಲಾಗುವುದು. ಇದು ಯಾವುದೇ ಪಕ್ಷದ ಹೋರಾಟವಲ್ಲ. ಪಕ್ಷಾತೀತವಾಗಿ ನಡೆಯುವ ಹೋರಾಟವಿದು ಎಂದರು.
ಪ್ರಭಾಕರ ಕೋರೆಯವರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ನಾವೂ ಯಾರ ಪರವೂ ಅಲ್ಲ. ಮೂರುಸಾವಿರ ಮಠದ ಆಸ್ತಿಗಾಗಿ ಹಣದ ಮಾತನಾಡಿರುವ ಕೋರೆಯವರಿಗೆ ನಾವೇ ಹಣವನ್ನ ಭಕ್ತರಿಂದ ಹೊಂದಿಸಿ ಕೊಡುತ್ತೇವೆ ಎಂದರು.
ಈಗಾಗಲೇ ಮಠದ ಆಸ್ತಿಯನ್ನ ಬೇಕಾದಷ್ಟು ತೆಗೆದುಕೊಂಡಿರೋ ಕೆಎಲ್ಇ, ಇನ್ನೂ ಎಷ್ಟನ್ನ ಪಡೆಯಬೇಕೆಂದು ಮುನ್ನಡೆದಿದ್ದಾರೆ ಎಂದು ಪ್ರಶ್ನಿಸಿದ ಅನಿಲಕುಮಾರ ಪಾಟೀಲ, ಮಠದ ಆಸ್ತಿಯನ್ನ ಉಳಿಸಲು ಹೋರಾಟ ಮಾಡುವುದು ನಿಶ್ಚಿತ ಎಂದರು.