ಪಂಚಾಯತಿಗಳಿಗೆ ನೇಮಕ ಮಾಡಿದರೇ ರಾಜ್ಯದಲ್ಲಿ ಹೋರಾಟ: ಡಿ.ಕೆ.ಶಿವಕುಮಾರ
1 min read‘- ಪಕ್ಷಾಂತರ ವಿಚಾರವಾಗಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು, ಸಲಹೆಗಳು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಆಗುತ್ತಿರುವ ಚರ್ಚೆ ಅಭಿಪ್ರಾಯಗಳ ಬಗ್ಗೆ ಸಮಿತಿ ರಚನೆಯಾಗಿ ನಮ್ಮ ಅಭಿಪ್ರಾಯ ಪಡೆಯಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿರಲಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಕಾಗೇರಿ ಅವರು ಯಾಕೆ ಅವರನ್ನು ಪರಿಗಣಿಸಿಲ್ಲವೊ ಗೊತ್ತಿಲ್ಲ. ಅವರೂ ಕೂಡ ಶಾಸಕರಂತೆ ಪ್ರತಿನಿಧಿಗಳಾಗಿದ್ದು, ಅವರ ಅಭಿಪ್ರಾಯ ಪರಿಗಣಿಸಬೇಕು.
– ತಮಗೆ ಅಧಿಕಾರದ ಅವಧಿಯಲ್ಲಿ ಶಾಸಕರು ತಮ್ಮ ವೈಯಕ್ತಿಕ ವಿಚಾರಕ್ಕೆ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಪಕ್ಷದ ವಿರುದ್ಧ ಬೇರೆ ಪಕ್ಷಕ್ಕೆ ಹೋಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಅಂತಾ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಈ ವಿಚಾರವಾಗಿ ನಮ್ಮ ಪಕ್ಷಗಳಲ್ಲಿ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. 10ನೇ ತಾರೀಕಿನೊಳಗೆ ಪಕ್ಷದ ಹಿರಿಯ, ಕಿರಿಯ ಹಾಗೂ ತಜ್ಞರನ್ನು ಕೇಳಿ ಅವರ ಅಭಿಪ್ರಾಯ ತೆಗೆದುಕೊಂಡು ಒಂದು ಪಕ್ಷವಾಗಿ ಅಭಿಪ್ರಾಯ ನೀಡಲಿದ್ದೇವೆ.
– ಪಂಚಾಯತಿಗಳಲ್ಲಿ ಚುನಾವಣೆ ಇಲ್ಲದೇ ನಾಮನಿರ್ದೇಶನ ಮಾಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿರುವ ಬಗ್ಗೆ ನಾವೆಲ್ಲರೂ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಾವು ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸಬೇಕು ಅಂತಾ ಆಗ್ರಹಿಸುತ್ತಿದ್ದೇವೆ. ನಾಮನಿರ್ದೇಶನಕ್ಕೆ ಅವಕಾಶ ನೀಡಬಾರದು ಅಂತಾ ಕಾನೂನು ಹಾಗೂ ರಾಜಕಾರಣದ ಹೋರಾಟ ಮಾಡಲಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡುವ ತೀರ್ಮಾನ ನಿಮಗೂ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ನಾನು ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡಲು ಬಯಸುತ್ತೇನೆ. ನೀವು ಚುನಾವಣೆ ನಡೆಸಿ, ಅದನ್ನು ಬಿಟ್ಟು ನಾಮನಿರ್ದೇಶನ ಮಾಡಿದರೆ ಪಂಚಾಯತ್ ರಾಜ್ ವ್ಯವಸ್ಥೆ ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ.
– ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ಅವರಿಗೆ ಆಹಾರ ಕಿಟ್ ಸಿಕ್ಕಿಲ್ಲ. ಅವರಿಗೆ ಉದ್ಯೋಗವಿಲ್ಲ, ಆಹಾರವಿಲ್ಲ. ಅವರು ತಮ್ಮ ಊರುಗಳಿಗೆ ಹೋಗಲು ಹೆಚ್ಚೆಂದರೆ ಪ್ರತಿ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಅದನ್ನು ನೀಡಲು ಸರ್ಕಾರ ಸಿದ್ಧವಿಲ್ಲ.
– ದೇಶ ಕಟ್ಟುತ್ತಿರುವ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ನಡೆಸಿಕೊಳ್ಳಬಾರದು. ಅವರನ್ನು ಗೌರವಯುತವಾಗಿ ಕಳುಹಿಸಿಕೊಡಬೇಕು. ಸಂಕಷ್ಟದ ಸಮಯದಲ್ಲಿ ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ನಡೆಯಬೇಕಿತ್ತು. ಆದರೆ ಅದು ಸಾಧ್ಯವಿಲ್ಲ. ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ಇವರಿಗಾಗಿ 7 ಲಕ್ಷ ಆಹಾರ ಕಿಟ್ ತಯಾರಿಸಲಾಗಿದ್ದು, ಅವೆಲ್ಲವೂ ಬಿಜೆಪಿ ಕಾರ್ಯಕರ್ತರಿಗೆ ಹೋಗಿದೆಯೇ ಹೊರತು ಶೇ.10 ರಷ್ಟೂ ಕಾರ್ಮಿಕರಿಗೆ ಸಿಕ್ಕಿಲ್ಲ.