ಧಾರವಾಡಕ್ಕೆ ಶಾಶ್ವತ ವಸ್ತು ಪ್ರದರ್ಶನ ಕೇಂದ್ರ- ಆಡಳಿತಾತ್ಮಕ ಒಪ್ಪಿಗೆ ನೀಡಿ: ಸಚಿವ ಜಗದೀಶ ಶೆಟ್ಟರ್ ಸೂಚನೆ
1 min readಬೆಂಗಳೂರು: ಹುಬ್ಬಳ್ಳಿ – ಧಾರವಾಡ ಜಿಲ್ಲೆಯ ಶಾಶ್ವತ ವಸ್ತು ಪ್ರದರ್ಶನ ಕೇಂದ್ರ ಕಾಮಗಾರಿಗೆ ಅಗತ್ಯವಿರುವ ಆಡಳಿತಾತ್ಮಕ ಒಪ್ಪಿಗೆಯನ್ನು ಈ ಕೂಡಲೇ ನೀಡಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ಖನಿಜ ಭವನದಲ್ಲಿ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಎಂ ಎಸ್ ಎಂ ಇ ಹಾಗೂ ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್, ಎಂ ಎಸ್ ಎಂ ಇ ಇಲಾಖೆ ನಿರ್ದೇಶಕ ಜಿಯಾವುಲ್ಲಾ ಖಾನ್ ಹಾಗೂ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಪದಾಧಿಕಾರಿಗಳೊಂದಿಗೆ ಈ ಬಗ್ಗೆ ಸಭೆಯನ್ನು ನಡೆಸಲಾಯಿತು.
ಜಿಲ್ಲೆಯಲ್ಲಿ ಶಾಶ್ವತ ವಸ್ತು ಪ್ರದರ್ಶನ ಕೇಂದ್ರದ ಸ್ಥಾಪನೆಗೆ ಕೆಲವು ಆಡಳಿತಾತ್ಮಕ ಒಪ್ಪಿಗೆಗಳ ಬಾಕಿಯಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ತಿಂಗಳನಿಂದ ಕಾಮಗಾರಿಯು ಸ್ಥಗಿತಗೊಂಡಿದೆ. ಈ ಸಂಬಂಧ ಕೇಂದ್ರ ಕಚೇರಿಯಿಂದ ಅಗತ್ಯವಿರುವ ಆಡಳಿತಾತ್ಮಕ ಒಪ್ಪಿಗೆಗಳನ್ನು ಈ ಕೂಡಲೇ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡುವಂತೆ ಸಚಿವ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.