ಆಸ್ಪತ್ರೆಯ ಆ “ಪೋನ್”: ಬೂದಿಯಾಗಿದ್ದ ತಾಯಿಯ ಕೊಲೆ ಪತ್ತೆ- ಹತ್ಯೆ ಮಾಡಿದ್ದೇಕೆ ಗೊತ್ತಾ..?
1 min readವಿಜಯಪುರ: ಇಟ್ಟಿಗೆಯಿಂದ ಹೊಡೆದು ಗಾಯಗೊಳಿಸಿ, ತನ್ನ ತಾಯಿಯನ್ನ ಬೇರೆ ಆಸ್ಪತ್ರೆಯಲ್ಲಿ ತೋರಿಸುತ್ತೇನೆಂದು ಹೇಳಿ ಸಂಬಂಧಿಕರ ಸಹಾಯದಿಂದ ಹಡೆದವ್ವಳನ್ನೇ ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಚಿಮ್ಮಲಗಿ ತಾಂಡಾ ನಿವಾಸಿ ಸುನೀಲ ಲಮಾಣಿಯೇ ತಾಯಿಯನ್ನ ಹತ್ಯೆಗೈದಿದ್ದಾನೆ. ಜುಲೈ 24ರಂದು ತನ್ನ ತಾಯಿ ಚಾಂದಿಬಾಯಿ ಲಮಾಣಿಗೆ ಕುಡಿಯಲು ಹಣ ಕೇಳಿದ್ದಾನೆ. ನೀನು ಕುಡಿದು ಹಾಳು ಮಾಡುತ್ತಿ, ನನ್ನ ಬಳಿ ಹಣವಿಲ್ಲ ಎಂದು ಚಾಂದಿಬಾಯಿ ಹೇಳಿದ್ದಾಳೆ. ಕುಪಿತಗೊಂಡ ಸುನೀಲ ಹೆತ್ತ ತಾಯಿಗೆ ಇಟ್ಟಿಗೆಯಿಂದ ಹೊಡೆದು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಆದ್ರೇ, ತನ್ನ ತಾಯಿಗೆ ಚಿಕಿತ್ಸೆ ಬೇರೇಡೆ ಕೊಡಿಸುತ್ತೇವೆಂದು ಒತ್ತಾಯವಾಗಿ ಡಿಶ್ಚಾರ್ಜ್ ಮಾಡಿಸಿ, ಮನೆಗೆ ಕರೆದುಕೊಂಡು ಹೋಗಿ ತಾಯಿಯನ್ನು ಸುನೀಲ ಆತನ ಸಹೋದರ ಕುಮಾರ ಹಾಗೂ ಮಾವ ಗಂಗಾರಾಮ ಸೇರಿದಂತೆ ಇನ್ನುಳಿದವರ ಸಹಾಯ ಪಡೆದು ತಾಯಿಯನ್ನ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಸಾಕ್ಷ್ಯ ಸಿಗದಂತೆ ಸುಟ್ಟುಹಾಕಿದ್ದಾರೆ..
ಆದ್ರೇ, ಖಾಸಗಿ ಆಸ್ಪತ್ರೆಯಿಂದ ಬಂದ ಫೋನ್ ಕಾಲ್ ನಿಡಗುಂದಿ ಠಾಣೆ ಪೊಲೀಸರನ್ನು ಎಚ್ಚರಿಸಿತ್ತು. ಇಟ್ಟಿಗೆ ಏಟು ಬಿದ್ದು ಗಾಯಗೊಂಡಿದ್ದ ಮಹಿಳೆಯ ಬಗ್ಗೆ ಸಂಶಯವಿದೆ ಎಂದು ಕಾಲ್ ಬಂದಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿದ ನಿಡಗುಂದಿ ಠಾಣೆ ಪೊಲೀಸರು ಮಕ್ಕಳನ್ನು ತೀವ್ರ ವಿಚಾರಣೆ ನಡೆಸಿದ್ದಾಗ ತಾಯಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.