ಸುಪಾರಿ ಕೊಟ್ಟು ತಾಯಿಯನ್ನೇ ಕೊಲ್ಲಿಸಿದ ಪುತ್ರ: ಟೀಂಗೆ ತಂದೆಯೂ ಸಪೋರ್ಟ್..?
1 min readಬೆಂಗಳೂರು: ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನ ಮಾರಾಟ ಮಾಡಲು ಹೊಂಚು ಹಾಕಿದ್ದ ಮಗನಿಗೆ ವಿರುದ್ಧವಾಗಿ ನಡೆದುಕೊಂಡ ತಾಯಿಯನ್ನೇ 7 ಲಕ್ಷಕ್ಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಬಿಕ್ಕನಹಳ್ಳಿ ವಾಸಿಯಾಗಿದ್ದ ಗೀತಾ,ಕೌಟುಂಬಿಕ ಕಲಹ ಹಿನ್ನಲೆ 15 ವರ್ಷಗಳ ಹಿಂದೆಯೇ ಪತಿ ಆಂಜನಿಯನ್ನ ಬಿಟ್ಟು ವಾಸಿಸುತ್ತಿದ್ದರು. ಇದೇ ತಿಂಗಳ 16 ರಂದು ಮನೆಯ ಶೀಟ್ ತೆರೆದು ಮನೆಯೊಳಗೆ ನುಗ್ಗಿದ್ದ ಕಿಡಿಗೇಡಿಗಳು ಮಚ್ಚು ಲಾಂಗ್ ಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು.
ಗೀತಾ ಮನೆ ಬಿಟ್ಟು ಹೋದ ಬಳಿಕ ಗಂಡ ಮತ್ತು ಮಗ ಜೊತೆಯಲ್ಲಿಯೇ ವಾಸವಿದ್ದರು. ಆ ಮನೆಯು ಗೀತಾ ಅವರ ತಾಯಿ ಹೆಸರಿನಲ್ಲಿತ್ತು. ಇತ್ತೀಚೆಗೆ ಆಸ್ತಿ ಮಾರಾಟ ಮಾಡಲು ಮಗ ವರುಣ್ ನಿರ್ಧರಿಸಿದ್ದ. ಇದನ್ನು ವಿರೋಧಿಸಿ ಗೀತಾ ಕೋರ್ಟ್ ಮೆಟ್ಟಿಲೇರಿದ್ದರು. ಆಸ್ತಿ ಮಾರಾಟ ಮಾಡಲು ಬಿಡುತ್ತಿಲ್ಲ ಎಂದು ಕುಪಿತಗೊಂಡ ವರುಣ್ ಹಾಗೂ ಗಂಡ ಆಂಜನಿ, 7 ಲಕ್ಷ ಸುಪಾರಿ ನೀಡುವ ಮಾತುಕತೆ ನಡೆಸಿದ್ದರು. ಅದರಂತೆ ಗೀತಾಳನ್ನು ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2 ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದ ವರುಣ್,ಖರೀದಿದಾರರಿಂದ 1 ಕೋಟಿ ಮುಂಗಡವಾಗಿ ಹಣ ಪಡೆದಿದ್ದ ಎನ್ನಲಾಗಿದೆ. ಈ ವಿಷಯ ಗೊತ್ತಾಗಿ ಗೀತಾ ಆಸ್ತಿ ಮೇಲೆ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ವಿಚಾರಕ್ಕೆ ತಾಯಿ ಹಾಗೂ ಮಗ ಮತ್ತು ಗಂಡನ ಜಗಳ ಜಾಸ್ತಿಯಾಗಿತ್ತು. ಮೂವರು ಹಲವು ಬಾರಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದರು.
ತಾಯಿ ಹೆಸರಿನ ಆಸ್ತಿ ಆಗಿದ್ದರಿಂದ ಗೀತಾ ಪರವೇ ಕೋರ್ಟ್ ತೀರ್ಪು ನೀಡಿತ್ತು. ಇದನ್ನು ತಿಳಿದ ವರುಣ್ ತಾಯಿಯನ್ನೇ ಕೊಲೆ ಮಾಡಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೈಂ ಬ್ಯಾಗ್ ಗ್ರೌಂಡ್ ಇದ್ದ ಮಾಸ್ತೇನಹಳ್ಳಿಯ ನವೀನ್ ಕುಮಾರ್ ಜೊತೆಯಾಗಿ ತಾಯಿಯನ್ನು ಕೊಲೆ ಮಾಡಲು 7 ಲಕ್ಷಕ್ಕೆ ಡೀಲ್ ಕೊಟ್ಟಿದ್ದ. ಗೀತಾ ಮುಗಿಸಲು ಸುಪಾರಿ ಪಡೆದ ಆರೋಪಿ ನವೀನ್ ತನ್ನ ಸಹಚರರಾದ ಚಂದಾಪುರದ ನಾಗರಾಜು, ಪ್ರದೀಪ್ ಹಾಗೂ ನಾಗರಾಜರಿಗೆ ಎಣ್ಣೆ ಪಾರ್ಟಿ ಕೊಡಿಸಿ ಬಳಿಕ ನಾಲ್ಕು ಮಂದಿ ಸೇರಿ ಮನೆಗೆ ನುಗ್ಗಿ ಗೀತಾಳನ್ನ ಕೊಲೆ ಮಾಡಿದ್ದರು. ಈಗ ಸುಪಾರಿ ನೀಡಿರುವ ಮಗ ಮತ್ತು ಪತಿಯನ್ನ ಪೊಲೀಸರು ಬಂಧಿಸಿ ತನಿಖೆಯನ್ನ ಮುಂದುವರೆಸಿದ್ದಾರೆ.