ಶಾಸಕ ನಿಂಬಣ್ಣನವರ ಕ್ಷೇತ್ರದ ನಾಲ್ವರು ಸಾಗವಾನಿ ಕಳ್ಳರ ಬಂಧನ
1 min read
ಧಾರವಾಡ: ಅಳ್ನಾವರ ತಾಲೂಕಿನ ಅರವಟಗಿ ಹಾಗೂ ಕಲಕೇರಿ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗವಾನಿ ಮರಗಳನ್ನ ಕಡಿದು, ತುಂಡು ತುಂಡಾಗಿ ಮಾಡಿ ಮಾರಾಟ ಮಾಡುತ್ತಿದ್ದ ಕಲಘಟಗಿ ಕ್ಷೇತ್ರದ ನಾಲ್ವರನ್ನ ಆಧುನಿಕ ತಂತ್ರಜ್ಞಾನ ಬಳಸಿ ಬಂಧನ ಮಾಡುವಲ್ಲಿ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಹೊನ್ನಾಪುರ ಪ್ರಕಾಶ ಲಕ್ಷ್ಮಣ ಪಾಟೀಲ, ರಾಮಾಪೂರದ ಸಂತೋಷ ಫಕ್ಕೀರಪ್ಪ ಶೆರಿಮನಿ, ದ್ಯಾಮಣ್ಣ ಫಕ್ಕೀರಪ್ಪ ಶೆರಿಮನಿ ಹಾಗೂ ಬಸವರಾಜ ಕರಿಯಪ್ಪ ನೀರಲಗಿ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಾಗವಾಗಿ ತುಂಡುಗಳು, ಒಂದು ದ್ವಿಚಕ್ರ ವಾಹನ ಹಾಗೂ ಕಟ್ಟಿಗೆ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಎರಡು ಅಶೋಕ ಲೈಲ್ಯಾಂಡ್ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಮೇಲೆ ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಹಲವು ವರ್ಷಗಳಿಂದಲೂ ಇದನ್ನ ಮಾಡುತ್ತಿದ್ದರೆಂದು ಗೊತ್ತಾಗಿದೆ.
ಧಾರವಾಡ ವಲಯ ಅರಣ್ಯಾಧಿಕಾರಿ ಆರ್.ಎಸ್.ಉಪ್ಪಾರ, ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ ಹಮಾಣಿ, ಪಿ.ಡಿ.ಮಣಕೂರ, ಎಂ.ಡಿ.ಲಮಾಣಿ, ಜಿ.ಎಂ.ಕಾಂಬಳೆ, ಸಿ.ಎಸ್.ರೊಟ್ಟಿ, ಅರಣ್ಯ ರಕ್ಷಕರಾದ ವಿಠ್ಠಲ ಜೋನಿ, ರಘು ಕುರಿಯವರ, ರಂಗಪ್ಪ ಕೋಳಿ, ಕಲ್ಲಪ್ಪ ಕೆಂಗಾರ, ಎಸ್.ಪಿ.ಹಿರೇಮಠ, ಸಂಗಣ್ಣ ಕರಡಿ, ಶಿವರಾಂ ಚವ್ಹಾಣ ದಾಳಿಯಲ್ಲಿ ಭಾಗವಹಿಸಿದ್ದರು.