ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಶಂಕರ ಪಾಟೀಲಮುನೇನಕೊಪ್ಪ: ಕ್ಷೇತ್ರದ ಜನರಿಗೆ ನೆಮ್ಮದಿ
1 min read
ಹುಬ್ಬಳ್ಳಿ: ನವಲಗುಂದ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಸ್ಮಾಶನ ಭೂಮಿಯ ಕೊರತೆಯಿದೆ. ಕಂದಾಯ ಇಲಾಖೆಯು ವಿಶೇಷವಾಗಿ 50 ಲಕ್ಷರೂಪಾಯಿಗಳ ಅನುದಾನ ಒದಗಿಸಿದ್ದು, ಕ್ಷೇತ್ರದ ಗ್ರಾಮಗಳಿಗೆ ಅಗತ್ಯ ಇರುವ ರುದ್ರಭೂಮಿಗೆ ಜಮೀನು ಖರೀದಿ ಮಾಡಲಾಗುವುದು ಎಂದು ಮೂಲ ಸೌಕರ್ಯ ಅಭಿವೃದ್ಧಿ, ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಕೋಳಿವಾಡ ಗ್ರಾಮದಲ್ಲಿ ಆಯೋಜಿಸಲಾದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುನೇನಕೊಪ್ಪ ಮಾತನಾಡಿದರು. ಕೋಳಿವಾಡ ಗ್ರಾಮದಲ್ಲೂ ಹಲವು ವರ್ಷಗಳಿಂದ ರುದ್ರಭೂಮಿಯ ಸಮಸ್ಯೆ ಇತ್ತು. ಇದನ್ನು ಪರಿಹರಿಸಲು ಖಾಸಗಿಯವರಿಗೆ ಸುಮಾರು 26 ಲಕ್ಷರೂಪಾಯಿಗಳನ್ನು ನೀಡಿ ಜಮೀನು ಖರೀದಿ ಮಾಡಲಾಗಿದೆ. ಹೀಗೆ ಅಗತ್ಯ ಇರುವ ಗ್ರಾಮಗಳಲ್ಲಿ ಕೂಡ ಜಮೀನು ಖರೀದಿ ಮಾಡಲಾಗುವುದು ಎಂದು ಹೇಳಿದರು.
ಹಿಂದೆ ನೀಡಿದ ಭರವಸೆಯಂತೆ ಸವದತ್ತಿ ರೇಣುಕಾಮಾತೆ ಸನ್ನಿದಿಯಲ್ಲಿರುವ ಮಲಪ್ರಭಾ ಜಲಾಶಯದಿಂದ ಧಾರವಾಡ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಪೈಪ್ ಲೈನ್ ಮುಖಾಂತರ ಸರಬರಾಜು ಮಾಡಲಾಗುವುದು. ಇದಕ್ಕಾಗಿ 1100 ಕೋಟಿ ವೆಚ್ಚದ ಯೋಜನೆ ಇದಕ್ಕಾಗಿ ಸಿದ್ದವಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು. ಕೋಳಿವಾಡ, ಮಲ್ಲಿಗವಾಡ ಸೇರಿದಂತೆ ಜಿಲ್ಲೆಯ 300 ಹೆಚ್ಚು ಹಳ್ಳಿಗಳಿಗೆ ಮಲಪ್ರಭಾ ನದಿ ನೀರು ಲಭಿಸಲಿದೆ ಎಂದರು.
ಕೋಳಿವಾಡ ಗ್ರಾಮಕ್ಕೆ 1 ಕೋಟಿ ರೂಪಾಯಿ ವಿಷೇಶ ಅನುದಾನವನ್ನು ಒದಗಿಸಲಾಗಿದೆ. ಕುಮಾರವ್ಯಾಸ ಭವನ, ಕುಡಿಯುವ ನೀರಿಗೆ ಕೆರೆ ನಿರ್ಮಾಣ, ನಿರಂತರ ಜ್ಯೋತಿ, ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರ ಮನವಿಯಂತೆ ಕೋಳಿವಾಡ ಉಮಚಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ದಪಡಿಸಲಾಗಿದೆ. ಇದರಂತೆ 8 ಕೋಟಿ ರುಪಾಯಿಗಳ ಅನುದಾನದ ಅಗತ್ಯವಿದೆ. ಇದರಲ್ಲಿ 5 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದ್ದು ರಸ್ತೆ ನಿರ್ಮಿಸಲಾಗುವುದು. ಅಧಿಕಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಹೆಚ್ಚಭಾರ ಹೊತ್ತು ಓಡಾವ ಟ್ರಕ್ಗಳ ಸಂಚಾರವನ್ನು ನಿಯಂತ್ರಿಸಬೇಕು. ಕೋಳಿವಾಡ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೂ ಪ್ರಯತ್ನಿಸಲಾಗುವುದು. ಕೊರೋನಾ ಎರಡನೇ ಅಲೇ ಪ್ರಾರಂಭವಾಗಬಹುದು. ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಾಡಬೇಕು. ಗ್ರಾಮದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಘಟಕಗಳನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಾಮದ ಜನರು ಹೋಬಳಿ, ತಾಲೂಕು, ಜಿಲ್ಲೆ ಕೇಂದ್ರಗಳಿಗೆ ವಿವಿಧ ಕಾರ್ಯಗಳಿಗಾಗಿ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ “ಗ್ರಾಮ ಒನ್” ಕೇಂದ್ರಗಳನ್ನು ತೆರೆಯುತ್ತಿದೆ ಎಂದು ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.