ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ: ಹೋರಾಟಕ್ಕೀಳಿದವರ ಬಂಧನ
1 min read
ಕಲಬುರಗಿ: ಕರ್ನಾಟಕದಲ್ಲೂ ಪ್ರತ್ಯೇಕ ರಾಜ್ಯದ ಕೂಗು ಬೇರೆ ಬೇರೆ ರೀತಿಯಲ್ಲಿ ಹಲವು ಸ್ವರೂಪಗಳನ್ನ ಪಡೆದುಕೊಳ್ಳಲು ಆರಂಭಿಸಿದ್ದು, ಉತ್ತರ ಕರ್ನಾಟಕದ ಕೂಗು ಆಗಾಗ ಕೇಳಿ ಬರುತ್ತಿರುವ ನಡುವೆಯೇ ಇಂದು, ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಯಿತು.
ಕಲಬುರಗಿ ನಗರದಲ್ಲಿ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಧ್ವಜಾರೋಹಣಕ್ಕೆ ಯತ್ನಿಸಿದ ಘಟನೆ ನಡೆಯಿತು. ಕಲ್ಯಾಣ ಕರ್ನಾಟಕವನ್ನೂ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಪ್ರತಿಭಟನಾ ನಿರತರು ದೂರಿದರು.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನೇತೃತ್ವದಲ್ಲಿ ನಡೆದ ಹೋರಾಟ ಮೊದಲು ಶಾಂತಿಯುತವಾಗಿ ನಡೆಯಿತು. ಕಲ್ಯಾಣ ಕರ್ನಾಟಕದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವದಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳು ಬರುವುದೇ ಇಲ್ಲ. ಹೀಗಾಗಿ ತಮ್ಮದೇ ಪ್ರತ್ಯೇಕ ರಾಜ್ಯವಾದರೇ, ನಮ್ಮ ಭಾಗದ ಜನರಾದರೂ ಸುಭಿಕ್ಷೆಯಿಂದ ಇರುತ್ತಾರೆಂದು ಪ್ರತಿಭಟನಾ ನಿರತರು ಹೇಳಿದರು.
ಇಷ್ಟೇಲ್ಲ ನಡೆಯುತ್ತಿದ್ದಾಗಲೇ ಹೋರಾಟಗಾರರು, ಪ್ರತಿಭಟನೆ ಮಾಡುತ್ತಲೇ ಪ್ರತ್ಯೇಕ ಧ್ವಜಾರೋಹಣ ಮಾಡಲು ಮುಂದಾದ ಕಾರಣ, ಪೊಲೀಸರು 20ಕ್ಕೂ ಹೆಚ್ಚು ಜನರನ್ನ ಬಂಧನ ಮಾಡಿದರು.