ನವಲಗುಂದ- ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡ ರೈತ- ರಾತ್ರೋರಾತ್ರಿ ಕಾರ್ಯಾಚರಣೆ ಆರಂಭ
1 min readಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ಹತ್ತಿರವಿರುವ ಹಳ್ಳದಲ್ಲಿ ರೈತರೋರ್ವರು ಸಿಲುಕಿಕೊಂಡಿದ್ದು, ಅವರನ್ನ ಹೊರಗೆ ತೆಗೆಯಲು ನೀರಿನ ರಭಸ ಹೆಚ್ಚಾಗಿದ್ದರಿಂದ ಅಡಚಣೆ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸೊಟಕನಾಳ ಗ್ರಾಮದ ಹೇಮರೆಡ್ಡಿ ನಾವಳ್ಳಿ ಎಂಬ ರೈತರೇ ಹೊಲಕ್ಕೆ ಹೋಗಿ ಮರಳಿ ಬರುವಾಗ ಹಳ್ಳದಲ್ಲಿ ಸಿಲುಕಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಇಳಿಸಂಜೆ ಮಾಹಿತಿ ಹೊರಗೆ ಬಂದಿದ್ದು, ನವಲಗುಂದ ಠಾಣೆಯ ಪಿಎಸೈ ಜಯಪಾಲ ಪಾಟೀಲ ಸಿಬ್ಬಂದಿಯೊಂದಿಗೆ ಹಳ್ಳದತ್ತ ಧಾವಿಸಿದ್ದು, ರೈತರನ್ನ ಹಳ್ಳದಿಂದ ಹೊರಗೆ ತೆಗೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹಳ್ಳದ ಪಕ್ಕದಲ್ಲಿ ಯಾವುದೇ ರೀತಿಯ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ರೈತ ಹೇಮರೆಡ್ಡಿಯ ಸರಿಯಾದ ರೀತಿಯಲ್ಲಿ ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆಯ ಸ್ವರೂಪವನ್ನ ಬದಲಿಸುವ ಬಗ್ಗೆ ಯೋಚನೆ ಮಾಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಸುವುದಕ್ಕೆ ಮುಂದಾಗಿದ್ದಾರೆ.
ಸೊಟಕನಾಳ ಗ್ರಾಮದ ಜನರು ರೈತನನ್ನ ಹೊರಗೆ ತರುವಲ್ಲಿ ಪೊಲೀಸರಿಗೆ ಸಾಥ್ ನೀಡಿದ್ದು, ಕಾರ್ಯಾಚರಣೆಗೆ ಬೇಕಾಗುವ ಎಲ್ಲವನ್ನೂ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ವ್ಯವಸ್ಥೆ ಮಾಡಿದ್ದಾರೆ.