ನವಲಗುಂದಲ್ಲಿ ಎರಡು ಗಂಟೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತ

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲದ ಕಾರಣದಿಂದ ಸುಮಾರು ಎರಡು ಗಂಟೆಯಿಂದ ನವಲಗುಂದ-ಸೊಲ್ಲಾಪುರ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಸಾರ್ವಜನಿಕರು ಪಟ್ಟಣ ದಾಟಲು ಹರಸಾಹಸ ಪಡುವಂತಾಗಿದೆ.
ನವಲಗುಂದ ಪಟ್ಟಣದ ಇಬ್ರಾಹಿಂಪುರ ಕ್ರಾಸ್ ಬಳಿ ವಾಹನಗಳನ್ನ ಎಲ್ಲೆಂದರಲ್ಲಿ ನಿಲ್ಲಿಸಿದ ಪರಿಣಾಮ ರಸ್ತೆ ಸಂಚಾರ ಹದಗೆಟ್ಟಿದೆ. ಯಾವುದೇ ರೀತಿಯ ಪೊಲೀಸರು ಸ್ಥಳದಲ್ಲಿ ಇಲ್ಲದೇ ಇರುವುದು ಕೂಡಾ ತೊಂದರೆಗೆ ಕಾರಣವಾಗಿದ್ದು, ಪಟ್ಟಣದ ಹೊರಗಡೆಯೂ ವಾಹನಗಳು ನಿಂತಿವೆ.
ಕಳೆದ ನಾಲ್ಕೈದು ದಿನಗಳಿಂದ ಸರಿಯಾದ ರೀತಿಯಲ್ಲಿ ಸಂಚಾರ ವ್ಯವಸ್ಥೆಯನ್ನ ಪೊಲೀಸರು ನಿಭಾಯಿಸದೇ ಇರುವುದರಿಂದ ವಾಹನ ಚಾಲಕರು ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸಿ ಹೋಗುತ್ತಿದ್ದಾರೆ. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ವಾಹನ ದಟ್ಟಣೆ ಕೂಡಾ ಹೆಚ್ಚಾಗುತ್ತಿದೆ.
ಮಧ್ಯಾಹ್ನ ಪೊಲೀಸರು ಸರಿಯಾದ ಸ್ಥಳದಲ್ಲಿ ಇಲ್ಲದೇ ಇರುವುದು ಈ ಆವಾಂತರಕ್ಕೆ ಕಾರಣವಾಗುತ್ತಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕಿದೆ, ಇಲ್ಲದೇ ಇದ್ದರೇ ಪಟ್ಟಣದಿಂದ ಸಂಚರಿಸುವ ವಾಹನ ಸವಾರರು, ನಿಮ್ಮ ಮೇಲೆ ಶಪಿಸದೇ ಇರರು.