Posts Slider

Karnataka Voice

Latest Kannada News

ರೈತಪರ ಕಾಳಜಿ- ಶಾಸಕ ವಿನಯ ಕುಲಕರ್ಣಿಯವರಿಂದ “ರೋವರ್ಸ್ ಸರ್ವೆ ಯಂತ್ರ” ವಿತರಣೆ…

1 min read
Spread the love

ಸರ್ವೆ ಕಾರ್ಯ ತ್ವರಿತಗೊಳಿಸಲು ಧಾರವಾಡ ಭೂದಾಖಲೆಗಳ ಇಲಾಖೆಗೆ ರೈತಸ್ನೇಹಿಯಾದ, ಅತ್ಯಾಧುನಿಕ ರೋವರ್ಸ ಸರ್ವೆ ಯಂತ್ರ ವಿತರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ: ‌ನಮ್ಮ ಹೊಲ ನಮ್ಮದಾರಿ ಯೋಜನೆ ಮೂಲಕ ರೈತರಿಗೆ ಅದ್ಬುತ ಸೇವೆ ನೀಡಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ರೈತರ ಜಮೀನುಗಳ ಸರ್ವೆ ಕಾರ್ಯ ತ್ವರಿತಗೊಳಿಸಲು ರೈತಸ್ನೇಹಿ ರೋವರ್ಸ ಅತ್ಯಾಧುನಿಕ ಯಂತ್ರ ವಿತರಿಸುವ ಮೂಲಕ ತಮ್ಮ ಕೃಷಿ ಕಾಯಕದ, ರೈತಪರ ಕಾಳಜಿ ತೋರಿದ್ದಾರೆ.

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ರೈತಪರ ತಮ್ಮ ಕಳಕಳಿಯ ದ್ಯೋತಕವಾಗಿ ಬೆಳಗಾವಿಯಲ್ಲಿ ಜರುಗಿದ್ದ ಚಳಿಗಾಲ ಅಧಿವೇಶನದಲ್ಲಿ ರೈತರು ತಮ್ಮ ಜಮೀನುಗಳ ಸರ್ವೆ ಮಾಡಿಸಲು ಭೂದಾಖಲೆಗಳ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಅವರಿಗೆ ಅತಿಯಾದ ಕಾರ್ಯಬಾಹುಳ್ಯದಿಂದ ಸರ್ವೆ ತುಂಬಾ ತಡವಾಗುತ್ತಿದೆ.
ಇದರಿಂದ ರೈತರಿಗೆ ತುಂಬಾ ತೊಂದರೆ ಆಗಿದೆ. ಸರಕಾರ ಆಧುನಿಕ ಉಪಕರಣಗಳನ್ನು ಪೂರೈಸಿ, ಸಮಸ್ಯೆ ಬಗೆಹರಿಸಿಬೇಕೆಂದು ಚುಕ್ಕೆ ಗುರುತಿನ ಪ್ರಶ್ನೆ ಕೇಳಿ, ಸರಕಾರದ ಗಮನ ಸೆಳೆದಿದ್ದರು.

ಈ ಕುರಿತ ಶಾಸಕರ ವಿಶೇಷ ಪ್ರಯತ್ನದ ಫಲವಾಗಿ ಧಾರವಾಡ ಜಿಲ್ಲೆಗೆ ಸರಕಾರ, ಕರಾರುವಾಕ್ಕಾಗಿ , ತ್ವರಿತವಾಗಿ ಸರ್ವೆ ಮಾಡುವ, ಐದು ರೋವರ್ಸ್ ಯಂತ್ರಗಳನ್ನು ನೀಡಿದ್ದು, ವಿನಯ ಕುಲಕರ್ಣಿ ಅವರು ಧಾರವಾಡ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮೋಹನ ಶಿವಣ್ಣವರ ಅವರಿಗೆ ಇಂದು (ಫೆ.25) ಬೆಳಿಗ್ಗೆ ಕಿತ್ತೂರು ಸರಕಾರಿ ಪ್ರವಾಸಿ ಮಂದಿರದಲ್ಲಿ ವಿತರಿಸಿದರು.

ನಂತರ ಅವರು ಮಾತನಾಡಿ, ರೈತರು ತಮ್ಮ ಜಮೀನು ಸರ್ವೆ, ಹಿಸ್ಸಾ ಎಂಟ್ರಿ, ಹದ್ದಬಸ್ತು ಮಾಡಿಸುವುದು ಮುಂತಾದವುಗಳಿಗಾಗಿ ಅರ್ಜಿ ಸಲ್ಲಿಸಿ, ವರ್ಷಾನುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಮಷಿನ್ ದಿಂದ ಸರ್ವೆ ಮಾಡಲು ಖಾಸಗಿ ಅವರು ವಿಪರಿತ ಚಾರ್ಜ ಮಾಡುತ್ತಾರೆ. ಇದರಿಂದ ರೈತರಿಗೆ ಶೋಷಣೆ ಆಗುತ್ತಿದೆ. ಮದ್ಯವರ್ತಿಗಳ ಹಾವಳಿ, ಖಾಸಗಿಯವರ ಹೆಚ್ಚು ಹಣದ ಬೇಡಿಕೆ ತಪ್ಪಿಸಿ,
ಇಲಾಖೆಯಿಂದಲೇ ತ್ವರಿತವಾಗಿ ಸರ್ವೆ ಕಾರ್ಯ ಕೈಗೊಳ್ಳಲು ಈ ಆಧುನಿಕ ಉಪಕರಣ ರೋವರ್ಸ್ ನೀಡಲಾಗಿದೆ ಎಂದು ಅವರು ತಿಳಿಸಿದರು.

ರೈತರ ಸಾವಿರಾರು ಅರ್ಜಿಗಳು ಬಾಕಿ ಇವೆ ಎಂದು ರೈತರು ದೂರುತ್ತಿದ್ದಾರೆ. ಇಲಾಖೆ ಅಧಿಕಾರಿಗಳು, ಧಾರವಾಡ ತಾಲೂಕು ಸೇರಿದಂತೆ ಬೇಡಿಕೆ ಹೆಚ್ಚಿರುವ ತಾಲೂಕುಗಳಲ್ಲಿ ಈ ರೋವರ್ಸ್ ಯಂತ್ರ ಬಳಿಸಿ, ಸರ್ವೆ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕೆಂದು ಹೇಳಿದರು.

ಸರಿಸುಮಾರು ಒಂದು ಗಂಟೆಯಲ್ಲಿ ಶೇ.99 ರಷ್ಟು ಕರಾರುವಕ್ಕಾಗಿ ಒಂದು ಜಮೀನು ಸರ್ವೆ ಮಾಡಬುದಾದ ಆಧುನಿಕ ಉಪಕರಣ ರೋವರ್ಸ್ ಯಂತ್ರವನ್ನು ರೈತರ ಜಮೀನುಗಳ ಸರ್ವೆ ಕೆಲಸಕ್ಕಾಗಿ ಪ್ರಥಮವಾಗಿ ಧಾರವಾಡ ಜಿಲ್ಲೆಗೆ ಸರಕಾರ ನೀಡಿದೆ. ಇದನ್ನು ಬಳಸಿಕೊಂಡು ಬಾಕಿ ಅರ್ಜಿಗಳನ್ನು ಪರಿಶೀಲಿಸಿ, ಶೀಘ್ರವಾಗಿ ಅಧಿಕಾರಿಗಳು ವಿಲೇವಾರಿ ಮಾಡಬೇಕು ಎಂದು ಶಾಸಕ ವಿನಯ ಕುಲಕರ್ಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದೆ ರೈತರ ಜಮೀನುಗಳ ಅಳತೆ ಮಾಡುವ ಸಂದರ್ಭದಲ್ಲಿ ಎತ್ತರವಾದ ಬೆಳೆಗಳು ಇದ್ದಾಗ ಹಾಗೂ ಮಳೆ ಬಂದ ಸಂದರ್ಭದಲ್ಲಿ ಭೂ ಮಾಪಕರು ಜಮೀನುಗಳಲ್ಲಿ ಹೋಗಿ ಅಳತೆ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಹಾಗೂ ಸರ್ಕಾರಿ ಕೆರೆಗಳನ್ನು ಮತ್ತು ಅರಣ್ಯ ಜಮೀನುಗಳನ್ನು ಅಳತೆ ಮಾಡುವ ಸಂದರ್ಭದಲ್ಲಿ ಈ ಹಿಂದಿನ ಸಾಂಪ್ರದಾಯಿಕ ಅಳತೆ ಉಪಕರಣಗಳಾದ ಚೈನ್ ಮತ್ತು ಪ್ಲೈನ್ ಟೇಬಲ್ ನಿಂದ ಅಳತೆ ಕೆಲಸ ಕೈಗೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಈ ಅತ್ಯಾಧುನಿಕ ರೋವರ್ಸ್ ಉಪಕರಣಗಳಿಂದ ಅಳತೆ ಕೆಲಸವನ್ನು ಸುಗಮವಾಗಿ ಮತ್ತು ನಿಖರವಾಗಿ ಕೈಗೊಳ್ಳಬಹುದೆಂದು ಅವರು ತಿಳಿಸಿದರು .
ಜಿಲ್ಲೆಯಲ್ಲಿ ಸುಮಾರು 423 ಗ್ರಾಮಗಳಿದ್ದು, ಲಕ್ಷ್ಯಾಂತರ ರೈತರ ಜಮೀನುಗಳ ಸರ್ವೆ ನಂಬರಗಳಿವೆ. ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ‌ ಮಾಡಲು ಮತ್ತು ಸರ್ವೆ ಕಾರ್ಯ ನಿಖರವಾಗಿ ಮಾಡಲು ರೋವರ್ಸ್ ಸಹಾಯ ಮಾಡುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ನಮ್ಮ ಹೊಲ, ನಮ್ಮ ದಾರಿ ಯೋಜನೆಯ ಯಶಸ್ವಿ ಅನುಷ್ಠಾನದ ಮೂಲಕ ಧಾರವಾಡ ಗ್ರಾಮೀಣ ಮತಕ್ಷೇತ್ರ ಈ ಹಿಂದಿನ ನನ್ನ ಶಾಸಕತ್ವ ಅವಧಿಯಲ್ಲಿ ರಾಜ್ಯಕ್ಕೆ ಮಾದರಿ ಆಗಿತ್ತು. ಈಗ ಅಧಿಕಾರಿಗಳು ಅತ್ಯಾಧುನಿಕ ರೋವರ್ಸ್ ಯಂತ್ರ ಬಳಿಸಿ, ರೈತರಿಗೆ ತಕ್ಷಣ ಸರ್ವೆ ಕಾರ್ಯ ಮುಗಿಸಿ, ನೇರವಾಗುವ ಮೂಲಕ ರಾಜ್ಯದ ರೈತರಿಗೆ ಮಾದರಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ವಿನಯ ಕುಲಕರ್ಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕ ಮೋಹನ ಶಿವಣ್ಣನವರ ಹಾಗೂ ಭೂ ದಾಖಲೆಗಳ ಧಾರವಾಡ ತಾಲೂಕಿನ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್. ಎಫ್. ಸಿದ್ದನಗೌಡರ, ರೈತ ಮುಖಂಡರಾದ ಪ್ರಕಾಶ ಘಾಟಗೆ, ಅರವಿಂದ ಏಗನಗೌಡರ, ಸಂಜೀವ ಲಕ್ಕಮನಹಳ್ಳಿ ಹಾಗೂ ಧಾರವಾಡ ತಾಲೂಕಿನ ತಪಾಸಕರಾದ ಆರ್.ಸಿ.ದೇಸಾಯಿ, ಭೂಮಾಪಕರಾದ ಮಹಾಂತೇಶ ಬಾಗಿ ಮತ್ತು ಧಾರವಾಡ ತಾಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರು, ಜನಪ್ರತಿನಿಧಿಗಳು, ರೈತರು, ಭೂದಾಖಲೆಗಳ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *