ಧಾರವಾಡ ಗ್ರಾಮೀಣ: ಒಂದ್ಕಡೆ “ವಿಕೆ Boss”- ಇನ್ನೊಂದ್ಕಡೆ “ಐಟಿ Bhai”: ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಏನ್ಮಾಡ್ತಿದ್ದಾರೆ….!?

ಧಾರವಾಡ: ಈಗಾಗಲೇ ಕಳೆದುಕೊಂಡಿರುವ ಧಾರವಾಡ-71 ಮತ ಕ್ಷೇತ್ರವನ್ನ ಮರಳಿ ಪಡೆಯಬೇಕೆನ್ನುವ ಇರಾದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದಂತೆ ಕಾಣುತ್ತಿಲ್ಲ. ಹಾಗಾಗಿಯೇ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಯತ್ನಗಳು ನಡೆಯುತ್ತಿದ್ದರೂ, ಜಿಲ್ಲಾಧ್ಯಕ್ಷರುಗಳು ಮಾತ್ರ ಏನೂ ನಡದೇ ಇಲ್ಲದಂತೆ ಕೂತಿರುವುದು ಹಾಸ್ಯಾಸ್ಪದವಾಗಿದೆ.

ಧಾರವಾಡ ಗ್ರಾಮೀಣ ಭಾಗದ 71 ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರು ಕಳೆದ ಬಾರಿ ಬಿಜೆಪಿಯ ವಿರುದ್ಧ ಸೋತ ನಂತರವೂ ಅವರ ವರ್ಚಸ್ಸು ಕ್ಷೇತ್ರದಲ್ಲಿ ಕಡಿಮೆಯಾಗಿಲ್ಲ. ಕೆಲವು ರಾಜಕೀಯವಲ್ಲದ ಕಾರಣಗಳಿಗಾಗಿ ಮಾಜಿ ಸಚಿವ ಕುಲಕರ್ಣಿ ಕ್ಷೇತ್ರದಿಂದ ದೂರವುಳಿಯಬೇಕಾಗಿದೆ. ಹಾಗಂತ, ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅವರನ್ನ ಕೈಬಿಟ್ಟಿಲ್ಲ.
ಆದರೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ವಿರುದ್ಧ ನಿರಂತರವಾಗಿ ಎರಡು ಬಾರಿ ಸೋತಿರುವ ಇಸ್ಮಾಯಿಲ ತಮಾಟಗಾರ ಅವರು ಧಾರವಾಡ-71 ಕ್ಷೇತ್ರದಲ್ಲಿ ಅಲೆದಾಡಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಇಲ್ಲಿಯೇ ಚುನಾವಣೆ ನಿಲ್ಲುವುದಾಗಿ ಹೇಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರು, ಸ್ವಾತಂತ್ರ್ಯ ನಡಿಗೆ ಆರಂಭಿಸಿದ್ದು, ಅದೇ ಸಮಯದಲ್ಲಿ ಇಸ್ಮಾಯಿಲ ತಮಾಟಗಾರ ಕ್ಷೇತ್ರದೊಳಗಿನ ಶಹರ ಭಾಗದಲ್ಲಿ ಸ್ವಾತಂತ್ರ್ಯ ನಡಿಗೆ ಆರಂಭಿಸಿದ್ದಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರುಗಳಾದ ಅನಿಲಕುಮಾರ ಪಾಟೀಲ ಹಾಗೂ ಅಲ್ತಾಪ ಹಳ್ಳೂರ ಅವರು ಏನು ಮಾಡುತ್ತಿದ್ದಾರೆ. ಇಲ್ಲಿ ಇದೇ ಥರಾ ಮುಂದುವರೆದರೇ ಬಿಜೆಪಿಯ ಹಾಲಿ ಶಾಸಕ ಅಮೃತ ದೇಸಾಯಿ ಅವರು ಮತ್ತೆ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ.