ಧಾರವಾಡದಲ್ಲಿ ‘ಕಿಡಕಿ ಕಳ್ಳನ’ ಬಂಧಿಸಿದ ವಿದ್ಯಾಗಿರಿ ಠಾಣೆ ಪೊಲೀಸರು…!

ಧಾರವಾಡ: ಬೇಸಿಗೆ ಕಾಲ ಆರಂಭವಾದ ಹಿನ್ನೆಲೆಯಲ್ಲಿ ಕಿಡಕಿಗಳನ್ನ ತೆರೆದು ಮಲಗುವವರ ಮನೆಯನ್ನೇ ಟಾರ್ಗೆಟ್ ಮಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡದ ಹುಸೇನ ಅಬ್ದುಲಗಫಾರ ಶೇಖ್ ಅಲಿಯಾಸ್ ನಮ್ಮಖವಾಲೆ ಎಂಬ ಆರೋಪಿಯೇ ಮನೆಯಲ್ಲಿ ಜನರು ಮಲಗಿದಾಗ ಕಿಡಕಿಯಿಂದ ಮೊಬೈಲ್, ಲ್ಯಾಪ್ ಟಾಪ್ ಎಗರಿಸುತ್ತಿದ್ದ. ಈ ಬಗ್ಗೆ ಹಲವು ದಿನಗಳಿಂದ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ಬಂಧಿತ ಆರೋಪಿಯಿಂದ 16 ವಿವಿಧ ಕಂಪನಿಯ ಮೊಬೈಲ್, ಒಂದು ಲ್ಯಾಪ್ ಟಾಪ್ ಹಾಗೂ ಕಳ್ಳತನಕ್ಕೆ ಹೋಗಲು ಬಳಕೆ ಮಾಡುತ್ತಿದ್ದ ಹೊಂಡಾ ಆ್ಯಕ್ಟಿವಾ ಸ್ಕೂಟರನ್ನ ವಶಕ್ಕೆ ಪಡೆಯಲಾಗಿದೆ.
ಡಿಸಿಪಿಗಳ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ನೇತೃತ್ವದಲ್ಲಿ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.