ಉಪ್ಪಿನಬೆಟಗೇರಿಯಲ್ಲಿ ಗ್ರಾ.ಪಂ ಸದಸ್ಯನಿಂದ ಯುವಕನ ಮೇಲೆ ಹಲ್ಲೆ…!

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯತಿ ಸದಸ್ಯನೋರ್ವ ಯುವಕನನ್ನ ಕ್ಷುಲಕ ಕಾರಣಕ್ಕೆ ಥಳಿಸಿದ್ದಾರೆಂದು ಆರೋಪಿಸಿಲಾಗಿದ್ದು, ಗಾಯಗೊಂಡ ಯುವಕ ಧಾರವಾಡದ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯತಿ ಸದಸ್ಯ ಸೈಯದಸಾಬ ಮದ್ನಿ ಎಂಬುವವರು ಅದೇ ಗ್ರಾಮದ ಮಹ್ಮದಸಾಧಿಕ ಲಾಲ್ಮಿಯಾ ಎಂಬ ಯುವಕನನ್ನು ಥಳಿಸಿದ್ದಾರೆನ್ನಲಾಗಿದೆ.
ಮಹ್ಮದ್ ಸಾಧಿಕನ ತಮ್ಮನ ಹತ್ತಿರ ಗ್ರಾಮ ಪಂಚಾಯ್ತಿ ಸದಸ್ಯ ಗುಟ್ಕಾ ಚೀಟು ಸೇರಿದಂತೆ ಇತ್ಯಾದಿ ತಂಬಾಕು ಉತ್ಪನ್ನಗಳನ್ನು ತರಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹ್ಮದ್ ಸಾಧಿಕನನ್ನು ಗ್ರಾಮ ಪಂಚಾಯ್ತಿ ಸದಸ್ಯ ಸೈಯದಸಾಬ ಹಾಗೂ ಆತನ ಸಹೋದರ ಸೇರಿಕೊಂಡು ಥಳಿಸಿದ್ದಾರೆ ಎಂದು ಮಹ್ಮದ ಸಾಧಿಕನ ಸಂಬಂಧಿಕರು ಆರೋಪಿಸಿದ್ದಾರೆ.
ಥಳಿತಕ್ಕೊಳಗಾದ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಆತನ ಕುಟುಂಬಸ್ಥರು ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.