ನೀರಾವರಿ ಇಲಾಖೆ ಜಾಗದಲ್ಲಿ “ಜಾಂಡಾ”- ತೀರ್ಲಾಪುರದಲ್ಲಿ 45 ಮನೆಗಳು ತೆರವು…

ಕಬಳಿಕೆ ಮಾಡಿಕೊಂಡ ಮನೆ ಹಾಗೂ ಜಾಗವನ್ನ ಖಾಲಿ ಮಾಡುವಂತೆ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವರು ಸುಖಾಸುಮ್ಮನೆ ಅಸಡ್ಡೆ ಮಾತನಾಡುತ್ತಲೇ ಸಮಯ ಕಳೆದಿದ್ದರು. ಹಾಗಾಗಿಯೇ ಇಂದು ಪೊಲೀಸ್ ದಂಡು ಆಗಮಿಸಿ, ತೆರವುಗೊಳಿಸಿತು..
ನವಲಗುಂದ: ನೀರಾವರಿ ಇಲಾಖೆಯ ವಸತಿ ಗೃಹವನ್ನೂ ಸೇರಿದಂತೆ ಇಲಾಖೆಯ ಜಾಗದಲ್ಲಿ ಅನಧಿಕೃತ ಮನೆಗಳನ್ನ ಕಟ್ಟಿಕೊಂಡು ವಾಸವಾಗಿದ್ದವರನ್ನ ಇಂದು ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ತೆರವುಗೊಳಿಸಲಾಯಿತು.

ನವಲಗುಂದ ತಾಲೂಕಿನ ತೀರ್ಲಾಪುರ ಗ್ರಾಮದ ಬ್ಯಾಹಟ್ಟಿ ರಸ್ತೆಯಲ್ಲಿನ ಸುಮಾರು 4.5 ಎಕರೆ ಜಮೀನಿನಲ್ಲಿ ಹಲವು ವರ್ಷಗಳ ಹಿಂದೆ, ಇಲಾಖೆಯವರಿಗಾಗಿ ಮನೆಗಳನ್ನ ಕಟ್ಟಲಾಗಿತ್ತು. ಅದೇ ಮನೆಯಲ್ಲಿದ್ದ ಗ್ರಾಮದ ಹಲವರು, ಕಬಳಿಕೆ ಮಾಡಿಕೊಂಡಿದ್ದಲ್ಲದೇ, ಜಾಗವನ್ನ ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರು.
ರಾಜ್ಯದಲ್ಲಿನ ನೀರಾವರಿ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನ ಹೊಂದಿರುವವರನ್ನ ತೆರವು ಮಾಡಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ಸುಮಾರು 45 ಮನೆಗಳನ್ನ ತೆರವು ಮಾಡಲಾಯಿತು.
ನವಲಗುಂದ ಠಾಣೆ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟು, ಮನೆಗಳನ್ನ ಖಾಲಿ ಮಾಡುವಂತೆ ಜನರಿಗೆ ಮನವರಿಕೆ ಮಾಡಿಕೊಟ್ಟರು.