“ವಿದ್ಯಾಗಮ” ಶಿಕ್ಷಕಿಯ ‘ರಾಬರಿ’: 90 ಗ್ರಾಂ ಬಂಗಾರ ಕೊಟ್ಟು ಜೀವ ಉಳಿಸಿಕೊಂಡ ಶಿಕ್ಷಕಿ..
1 min readಶಿವಮೊಗ್ಗ: ಸರಕಾರದ ವಿದ್ಯಾಗಮ ಯೋಜನೆಗಾಗಿ ಮನೆ ಮನೆಗೆ ಹೋಗುವ ಸಮಯದಲ್ಲಿ ಶಿಕ್ಷಕಿಯನ್ನ ದರೋಡೆ ಮಾಡಿದ ಘಟನೆ ಹೊಸನಗರ ತಾಲೂಕಿನ ಕೊಲ್ಲೂರ ರಸ್ತೆಯ ಸಮೀಪ ನಡೆದಿದೆ.
ಶಿವಮೊಗ್ಗ ಸಮೀಪದ ಕೊಡತೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಆರ್.ಮಂಜುಳಾರೇ ದರೋಡೆಗೆ ಒಳಗಾಗ ಶಿಕ್ಷಕಿಯಾಗಿದ್ದು, ಜೀವ ಉಳಿಸಿಕೊಳ್ಳಲು 90 ಗ್ರಾಂ ಬಂಗಾರದ ತಾಳಿ ಸರ ಮತ್ತು ಬಳೆಯನ್ನ ಬಿಚ್ಚಿಕೊಟ್ಟು ಬಂದಿರುವ ದುರ್ಘಟನೆ ನಡೆದಿದೆ.
ಮಕ್ಕಳು ಇರುವಲ್ಲಿಗೆ ಹೋಗಿ ಕಲಿಸಬೇಕಾದ ವಿದ್ಯಾಗಮ ಯೋಜನೆಯ ಪರಿಣಾಮವಿದು. ಶಿಕ್ಷಕರಿಗೆ ಯಾವುದೇ ಥರದ ವ್ಯವಸ್ಥೆ ಮಾಡದ ಪರಿಣಾಮವಿದು. ಎಂದಿನಂತೆ ಮಕ್ಕಳ ಬಳಿಗೆ ಹೊರಟಿದ್ದ ಶಿಕ್ಷಕಿ ಮಂಜುಳಾರಿಗೆ ಬೈಕಿನಲ್ಲಿ ಬಂದು ಮೂವರು ಚಾಕು ತೋರಿಸಿ ಭಯ ಬೀಳಿಸಿದ್ದಾರೆ. ಕುಂದಾಪುರ ಕನ್ನಡದಲ್ಲಿ ಮಾತನಾಡುತ್ತಿದ್ದ ಮೂವರು, ಬಂಗಾರದ ಆಭರಣವನ್ನ ಬಿಚ್ಚಿ ಕೊಡದೇ ಇದ್ದರೇ ಪ್ರಾಣ ತೆಗೆಯುವುದಾಗಿ ಹೇಳಿದ್ದಾರೆ.
ದರೋಡೆಕೋರರ ಮಾತಿನಿಂದ ಜೀವ ಉಳಿದರೇ ಸಾಕು ಎಂದು ಶಿಕ್ಷಕಿ ಮಂಜುಳಾ ತಾಳಿ ಸರ ಮತ್ತು ಬಂಗಾರದ ಬಳೆಗಳನ್ನ ಬಿಚ್ಚಿಕೊಟ್ಟು ಬಚಾವಾಗಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿದ್ದ ಮೂವರು ಒಂದೇ ಬೈಕಿನಲ್ಲಿ ಬಂದಿದ್ದರು. ಅಷ್ಟೇ ಅಲ್ಲ, ಬೈಕಿನ ನಂಬರ ಕಾಣದಂತೆ ಮರೆಮಾಚಿದ್ದರು ಎಂದು ಹೇಳಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕಿಯ ಸಮೇತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿಕ್ಷಕ ವಲಯ ಭಯಗೊಂಡಿದೆ