ಸರಕಾರಿ ಶಾಲೆ ಶಿಕ್ಷಕಿಯನ್ನ ಹತ್ಯೆ ಮಾಡಿ, ಸುಟ್ಟ ದುಷ್ಕರ್ಮಿಗಳು…!!!
ಶಿಕ್ಷಕಿಯ ಭೀಕರ ಹತ್ಯೆ: ಕೊಲೆ ಮಾಡಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು
ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ್ ಗ್ರಾಮದ ಹತ್ತಿರ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಅತಿ ಕ್ರೂರವಾಗಿ ಹತ್ಯೆ ಮಾಡಿ, ಸಾಕ್ಷ್ಯ ನಾಶಕ್ಕಾಗಿ ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ನಗರದ ಆನಂದ ಕಾಲೋನಿ ನಿವಾಸಿಯಾದ ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ದುರ್ದೈವಿ. ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವೃತ್ತಿಯ ನಿಮಿತ್ತ ಬೀದರ್ನಲ್ಲೇ ವಾಸವಿದ್ದ ಜ್ಯೋತಿ ಅವರು, ವಾರಕ್ಕೊಮ್ಮೆ ಕಲಬುರಗಿಯ ತಮ್ಮ ಮನೆಗೆ ಬಂದು ಹೋಗುತ್ತಿದ್ದರು.
ಯಥಾಪ್ರಕಾರ ಕಲಬುರಗಿಯಿಂದ ಬೀದರ್ಗೆ ಕೆಲಸಕ್ಕೆಂದು ವಾಪಸ್ ಹೋಗುತ್ತಿದ್ದಾಗ, ಮಾರ್ಗಮಧ್ಯೆ ಕಲ್ಮೂಡ್ ಗ್ರಾಮದ ಬಳಿ ಹಂತಕರು ಇವರನ್ನು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳಿಂದ ಶಿಕ್ಷಕಿಯನ್ನು ಮನಬಂದಂತೆ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು, ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಪರಾರಿಯಾಗಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕಮಲಾಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಕುರಿತು ‘ಅಪರಿಚಿತ ಶವ ಪತ್ತೆ’ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹಂತಕರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
