ವಿದ್ಯಾಗಮ ಡ್ಯೂಟಿಯಲ್ಲಿದ್ದಾಗಲೇ ಅನಾರೋಗ್ಯ: ಶಿಕ್ಷಕಿ ಸಾವು- ತಬ್ಬಲಿಯಾದ ಎರಡು ಮಕ್ಕಳು
1 min readಶಿವಮೊಗ್ಗ: ವಿದ್ಯಾಗಮ ಕರ್ತವ್ಯ ಮಾಡುತ್ತಿದ್ದಾಗಲೇ ಅನಾರೋಗ್ಯಗೊಂಡು ಶಿಕ್ಷಕಿಯೋರ್ವರು ಸಾವಿಗೀಡಾದ ಘಟನೆ ತಾಲೂಕಿನ ತಮ್ಮಡಿಹಳ್ಳಿ ಬಿಲ್ಗುಣಿಯಲ್ಲಿ ನಡೆದಿದ್ದು, ಶಿಕ್ಷಕ ಪತಿ ಹಾಗೂ ಎರಡು ಮಕ್ಕಳನ್ನ ಅಗಲಿದ್ದಾರೆ.
ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ನಿವಾಸಿಯಾಗಿದ್ದ ವತ್ಸಲಾ ಎಂಬ ಶಿಕ್ಷಕಿಯೇ ಬಿಲ್ಗುಣಿಯಲ್ಲಿ ವಿದ್ಯಾಗಮ ಕರ್ತವ್ಯ ನಿರ್ವಹಿಸಲು ತೆರಳಿದ್ದರು. ಹಠಾತ್ ಆಗಿ ಅನಾರೋಗ್ಯಗೊಂಡಿದ್ದರಿಂದ ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ವೈದ್ಯರು, ಲೋ ಬಿಪಿ ಇರುವುದರಿಂದ ತಜ್ಞ ವೈದ್ಯರ ಬಳಿ ಹೋಗುವಂತೆ ಸಲಹೆ ನೀಡಿದ್ದರು.
ವತ್ಸಲಾ ಅವರು ಕೊರೋನಾ ಇರುವ ಕಾರಣದಿಂದ ನಿಧಾನವಾಗಿ ಆಸ್ಪತ್ರೆಗೆ ತೋರಿಸುವ ಬಗ್ಗೆ ನಿರ್ಧಾರ ಮಾಡಿ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಬೆಳಗಿನ ಜಾವ ಹೊಟ್ಟೆಯಲ್ಲಿ ಸಂಕಟ ಎಂದು ನೀರು ಕುಡಿದ ಕೆಲವೊತ್ತಿನಲ್ಲೇ ವತ್ಸಲಾ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಹೊನ್ನಾಳಿ ತಾಲೂಕು ಆರುಂಡಿ ಗ್ರಾಮದ ವತ್ಸಲಾ ಪತಿ ವೀರಣಗೌಡ ಕೂಡಾ ಶಿಕ್ಷಕರಾಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗುರುಬಳಗ ಪ್ರಾರ್ಥಿಸಿದೆ.