ಕ್ಷಮಿಸಿ… ಭರವಸೆ ಹುಸಿಯಾಯಿತು “ಶಿಕ್ಷಕಿ” ಉಳಿಯಲಿಲ್ಲ…!

ಬಳ್ಳಾರಿ: ಕೊರೋನಾ… ಕೊರೋನಾ.. ಈ ವೈರಸ್ ಶಿಕ್ಷಣ ಇಲಾಖೆಯಲ್ಲಿನ ಪ್ರತಿಯೊಂದು ಮೂಲೆಯನ್ನೂ ಬಿಡದೇ ಕಾಡುತ್ತಿದೆ. ಜನರ ಜೀವನ ದುರ್ಭರವಾಗುತ್ತಿದೆ ಎಂದುಕೊಳ್ಳುವಾಗಲೇ, ಶಿಕ್ಷಕರ ಕುಟುಂಬಗಳು ನಲುಗತೊಡಗಿವೆ. ಬಾಳಿ, ಬದುಕಬೇಕಾದ ಜೀವಗಳು ಸದ್ದಿಲ್ಲದೇ ಕಣ್ಮರೆಯಾಗುತ್ತಿವೆ.
ಹೌದು.. ದಿನಕ್ಕೆ ಲೆಕ್ಕವಿಲ್ಲದಷ್ಟು ಜನರ ಸಾವು, ನೋವುಗಳ ನಡುವೆ ಶಿಕ್ಷಕರು ಸಾವಿಗೀಡಾಗುತ್ತಿದ್ದಾರೆ. ಪ್ರತಿಯೊಬ್ಬರ ಗೌರವಕ್ಕೆ ಪಾತ್ರವಾಗಿದ್ದ ಮಂಜುಳಾ ಟೀಚರ್ ಕೂಡಾ ಇನ್ನಿಲ್ಲವಾಗಿದ್ದಾರೆ.
ಹಗರಿಬೊಮ್ಮನಳ್ಳಿ ತಾಲೂಕಿನ ಕಿತನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ಹವಾಲ್ದಾರ್ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ.
ಡಿಡಿಪಿಐ ಕಚೇರಿಯ ವ್ಯವಸ್ಥಾಪಕರಾಗಿದ್ದ ಸುದರ್ಶನ ಅವರ ಪತ್ನಿಯಾಗಿದ್ದ ಶಿಕ್ಷಕಿ ಮಂಜುಳಾ ಅವರು, ಕೆಲವು ದಿನಗಳ ಹಿಂದೆ ಕೊರೋನಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಶಿಕ್ಷಕಿ ಮಂಜುಳಾ ಅವರು, ಶಿಕ್ಷಕ ರಂಗನಾಥ ಹವಾಲ್ದಾರ ಸಹೋದರಿ ಕೂಡಾ ಆಗಿದ್ದಾರೆ.
