ಕೊರೋನಾಗೆ ಇಬ್ಬರು ಶಿಕ್ಷಕರು ಬಲಿ- ಸಿಎಂ-ಡಿಸಿಎಂ ಕ್ಷೇತ್ರದಲ್ಲಿ ಪ್ರಾಣ ಕಳೆದುಕೊಂಡರು..!
1 min readಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯ ಶಿಕ್ಷಕಿ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಓರ್ವ ಶಿಕ್ಷಕರು ಕೊರೋನಾಗೆ ಬಲಿಯಾಗಿದ್ದು, ಇಡೀ ಶಿಕ್ಷಕ ಸಮೂಹ ಮತ್ತಷ್ಟು ಗಾಬರಿಗೊಂಡಿದೆ.
ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನದಲ್ಲಿ ಮುಚೂಣಿಯಲ್ಲಿದ್ದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸೀಮಾನಾಜ್ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಮ ಹಳೇನೇರಲ ಕೆರೆ ಗ್ರಾಮದ ಶಾಲಾ ಶಿಕ್ಷಕಿ ಕಳೆದ 25ರಂದು ಕೊರೋನಾ ಪಾಸಿಟಿವ್ ದೃಢಪಟ್ಟು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.
ಸುಮಾರು ಐದು ದಿನಗಳ ನಂತರ ಚಿಕಿತ್ಸೆ ಫಲಿಸದೇ ಸೀಮಾನಾಜ್ ಮೃತಪಟ್ಟಿದ್ದಾರೆ. ಸೀಮಾನಾಜ್ 2005-06ರಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದರು. ಉರ್ದು ಶಾಲೆಯ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದ್ದ ಶಿಕ್ಷಕಿ ಇನ್ನಿಲ್ಲವಾಗಿರುವುದು ದುಃಖಕರ ಸಂಗತಿಯಾಗಿದೆ.
ವಿದ್ಯಾಗಮ ಕರ್ತವ್ಯದಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರು ಕೂಡಾ ಕೊರೋನಾಗೆ ಬಲಿಯಾಗಿದ್ದಾರೆ. 54 ವರ್ಷದ ಶಿಕ್ಷಕರು ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಕೊರೋನಾ ಹಾವಳಿ ಶಿಕ್ಷಕ ವಲಯದಲ್ಲಿ ಅತಿಯಾದ ಆತಂಕ ಮೂಡಿಸುತ್ತಿದೆ. ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಿದವರೇ ಹೆಚ್ಚು ಶಿಕ್ಷಕರು ಕೊರೋನಾಗೆ ಜೀವ ಕಳೆದುಕೊಳ್ಳುತ್ತಿರುವುದು ತೀವ್ರ ನೋವಿಗೆ ಕಾರಣವಾಗುತ್ತಿದೆ. ಮೃತರ ಆತ್ಮಕ್ಕೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಹುಬ್ಬಳ್ಳಿ ಸಂತಾಪ ಸೂಚಿಸಿದೆ.