ಸರಕಾರಿ ಶಾಲೆಯಲ್ಲಿ ಅಪರೂಪವಾಗಿದ್ದು ನಡದೇ ಹೋಯಿತು…!

ಹುಬ್ಬಳ್ಳಿ: ಸರಕಾರಿ ಶಾಲೆಗಳನ್ನ ಅಸಡ್ಡೆಯಿಂದ ನೋಡುವವರು ಮುಜುಗರಕ್ಕೆ ಒಳಗಾಗುವಂತಹ ಕಾರ್ಯಕ್ರಮವೊಂದು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಹುಬ್ಬಳ್ಳಿಯ ಸುನಿಧಿ ಕಲಾ ಸೌರಭ, ಸುತಗಟ್ಟಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗಾಗಿ ಕವನ ರಚನೆ ಮಾಡುವ ‘ಕಾವ್ಯ ಕಮ್ಮಟ’ವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮೆರಗನ್ನ ತಂದಿದ್ದು, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿಯವರು. ಮಕ್ಕಳಿಗೆ ಕವನ ರಚನೆ ಮಾಡುವ ಶೈಲಿಯನ್ನ ಹೇಳಿ, ಮೆಚ್ಚಿಸಿದರು.
ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್ ಚೇರಮನ್ನ ದೇವೇಂದ್ರಪ್ಪ ಮಾಳಗಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಸಾಹಿತ್ಯವನ್ನ ಉಳಿಸಿ, ಬೆಳೆಸುವ ಕೆಲಸವನ್ನ ನಾವೂ ಮಾಡಬೇಕಿದೆ. ಆ ಕೆಲಸವನ್ನ ಸುನಿಧಿ ಕಲಾ ಸೌರಭ ಮಾಡುತ್ತಿದೆ ಎಂದರು.

ಅತಿಥಿಗಳಾಗಿ ಲಕ್ಷ್ಮಣರಾವ್ ಓಕ್, ಸಿದ್ಧಪ್ಪ ಕುಂಬಾರ, ಲೀಲಾವತಿ ತಡಸದ, ಸೇವಂತಿ ಕಾಂಬ್ಳೆ, ಶ್ರೀಮತಿ ನರೇಂದ್ರ, ಶ್ರೀಮತಿ ಓಕ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುನಿಧಿ ಕಲಾ ಸೌರಭದ ಸಂಸ್ಥಾಪಕ ಅಧ್ಯಕ್ಷ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ಮಕ್ಕಳಿಗೆ ತಾವು ಸಂಘಟಿಸುವ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ನಿವೃತ್ತ ಶಿಕ್ಷಕಿ ವೀಣಾ ಅಠವಲೆ(ಮೋಡಕ) ಕಾರ್ಯಕ್ರಮದ ಉದ್ದೇಶ ತಿಳಿಸಿದರು.
ಶಾಲೆಯ ಪ್ರಧಾನ ಗುರುಗಳಾದ ಎಂ.ಬಿ.ತಹಶೀಲ್ದಾರ ಸ್ವಾಗತಿಸಿದರು. ವಿದ್ಯಾ ಕುಲಕರ್ಣಿ ವಂದಿಸಿದರು. ಡಾ.ಆಶಾಬೇಗಂ ಮುನವಳ್ಳಿ ಕಾರ್ಯಕ್ರಮ ನಿರೂಪಿಸಿದರು.