ಖಾಸಗಿ ಆಸ್ಪತ್ರೆ ಜೊತೆ ಮಾತುಕತೆ ಫಲಪ್ರದ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್
1 min readಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಕುರಿತು ಪರಿಶೀಲಿಸಲು ಕೇಂದ್ರದಿಂದ ಆಗಮಿಸಿದ್ದ ತಂಡ ಸತತ ಎರಡು ದಿನಗಳ ಅಧ್ಯಯನದ ನಂತರ ತೃಪ್ತಿಯನ್ನು ವ್ಯಕ್ತಪಡಿಸಿ ಕೆಲವು ಸಲಹೆಗಳನ್ನು ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.
ಇಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಆನ್ ಲೈನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಸಚಿವರು, ಇಂದಿನ ಸಭೆ ಫಲಪ್ರದವಾಗಿದ್ದು ಹೆಚ್ಚಿನ ಚಿಕೆತ್ಸೆಗಾಗಿ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಲು ಸಹಮತ ಸೂಚಿಸಿವೆ. ಒಟ್ಟಾರೆ ಸಂಭೆಯಲ್ಲಿ ಪ್ರಮುಖವಾಗಿ 6 ರಿಂದ 7 ಸಾವಿರ ಬೆಡ್ ಗಳನ್ನು ಮೀಸಲಿರಿಸಲು ಒಪ್ಪಿಕೊಂಡಿದ್ದಾರೆ, ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರತಿ ಆಸ್ಪತ್ರೆಯ ಬೆಡ್ ಗಳು ಸೆಂಟ್ರಲೈಜಡ ವ್ಯವಸ್ಥೆ ಜಾರಿಯಾಗಲಿದ್ದು, ಯಾವ ಆಸ್ಪತ್ರೆಯಲ್ಲಿರುವ ಬೆಡ್ ಗಳು ಖಾಲಿ ಇವೆ ಮಾಹಿತಿ ಮಾಹಿತಿ ಸಿಗಲಿದೆ. ಶಂಕಿತ ಸೊಂಕಿತರು ಖಾಸಗಿಯಾಗಿ ಆಸ್ಪತ್ರೆ ಯಲ್ಲಿ ಸಹ ನೇರವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಶಿವಾಜಿನಗರದಲ್ಲಿರುವ ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆವತಿಯಿಂದ ನಿರ್ಮಿಸಿರುವ 200 ಹಾಸಿಗೆಗಳ ಸುಸಜ್ಜಿತ ಕಟ್ಟಡವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಇನ್ ಫೋಸಿಸ್ ಸಂಸ್ಥೆಗೆ ನೀಡಲಾಗಿದೆ. ಇಂದು ಈ ಆಸ್ಪತ್ರೆಯ ಕಾಮಾಗಾರಿಗಳನ್ನು ವೀಕ್ಷಿಸಲಾಯಿತು ಎಂದು ಹೇಳಿದರು.
ಇದೇ ಸಮಯದಲ್ಲಿ ಚಿತ್ರದುರ್ಗದ 96 ವರ್ಷದ ಗೋವಿಂದಮ್ಮಅವರು ಕೋವಿಡ್ ನಿಂದ ಗುಣಮುಖರಾಗಿ ಉಳಿದವರಿಗೆ ಸ್ಪೂರ್ತಿಯಾಗಿದ್ದಾರೆ, ಯಾರು ಸಹ ಭಯಪಟ್ಟುಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಮಹೇಂದ್ರ ಕಂಪನಿ ಜೊತೆ ಹೆಚ್ಚಿನ ಆಂಬುಲೆನ್ಸ್ ಗಳಿಗಾಗಿ ಒಡಂಬಡಿಕೆ ಮಾಡಿಕೊಂಡಿದ್ದು, ಕೋವಿಡ್ ವಿರುದ್ಧ ಪ್ರಮಾಣಿಕವಾಗಿ ಶ್ರದ್ಧೆಯಿಂದ ತಂಡವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಜೆ.ಜೆ.ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಭೆಗಳನ್ನು ಮಾಡಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ಸಹ ತರಲಾಗಿದೆ, ಕಾಲೇಜಿನ ಆಡಳಿತ ಮಂಡಳಿ ಸ್ಟೈಫಂಡಿಗೆ ಜವಬ್ಧಾರಿಯಾಗಿದ್ದು, ಕೂಡಲೇ ಸ್ಟೈಫಂಡ್ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಅವರು ಮಾತನಾಡಿ ಕೋವಿಡ್ ವಿಶ್ವದ ವಿಪತ್ತಾಗಿದ್ದು, ನಾವು ಇದನ್ನು ಮಾನಸಿಕವಾಗಿ ಎದುರಿಸಬೇಕಾಗುತ್ತದೆ, ಇದಕ್ಕಿರುವ ಮೂರು ಮುಖ್ಯ ಪರಿಹಾರಗಳೆಂದರೆ ಅಂತರವನ್ನು ಕಾಪಾಡಿಕೊಳ್ಳುವುದು, ಮಾಸ್ಕನ್ನು ಸರಿಯಾಗಿ ಧರಿಸುವುದು ಹಾಗೂ ದೇಹದ ಟೆಂಪರೇಚರನ್ನು ಆಗಾಗ್ಗೆ ತಪಾಸಣೆ ಮಾಡಿಕೊಳ್ಳುವುದು. ಈ ಮೂರು ಅಂಶಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ಇಂದು ನಮ್ಮ ರಾಜ್ಯದಲ್ಲಿ 82 ಕೋವಿಡ್ ಟೆಸ್ಟ್ ಲ್ಯಾಬ್ ಗಳಿದ್ದು, ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಮಾತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಸ್ತುತ ಒಂದು ದಿನಕ್ಕೆ ರಾಜ್ಯದಲ್ಲಿ 18000 ಟೆಸ್ಟ್ ಗಳನ್ನು ಮಾಡಲಾಗುತ್ತಿದೆ ಮತ್ತು ಕೆಲವೇ ದಿನಗಳಲ್ಲಿ ದಿನಕ್ಕೆ 30000 ಜನರಿಗೆ ಟೆಸ್ಟ್ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಆ್ಯಂಟಿಜೆನ್ ಟೆಸ್ಟ್ ಆರಂಭಿಸಲು ಯೋಜಿಸಲಾಗಿದ್ದು, ಇದರಿಂದ ಕೆಲವೇ ನಿಮಿಷಗಳಲ್ಲಿ ಕೋವಿಡ್ ಪ್ರಾಥಮಿಕ ತಪಾಸಣೆ ಮಾಡಬಹುದಾಗಿದ್ದು, ಇದರಲ್ಲಿ ಪಾಜಿಟಿವ್ ಕಂಡು ಬಂದಲ್ಲಿ ಅಂತಹವರನ್ನು ಹೆಚ್ಚಿನ ತಪಾಸಣೆಗಾಗಿ ಕಳುಹಿಸಬಹುದಾಗಿದೆ. ಪ್ರತಿ ಆಸ್ಪತ್ರೆಗಳು ಈ ಆ್ಯಂಟಿಜನ್ ಉತ್ಪನ್ನವನ್ನು ಬಳಸಲು ಮನವಿ ಮಾಡಿದರು.
ಕೋವಿಡ್ ಭಯದಿಂದ ಜನರು ಮುಕ್ತರಾಗಬೇಕು, ಇದೊಂದು ಸಂಪರ್ಕದಿಂದ ಬರುವ ವೈರಾಣುವಾಗಿದ್ದು ಭಯದಿಂದ ಜನರು ತಲ್ಲಣಗೊಂಡಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗುವುದಕ್ಕಿಂತ ಹೆಚ್ಚಿನ ಔಷಧಿ ಇಲ್ಲ, ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ.
ಶೇಕಡ 80-90 ಕೋವಿಡ್ ರೋಗಿಗಳಿಗೆ ಯಾವುದೇ ಗಂಭೀರ ತೊಂದರೆಯಾಗುವುದಿಲ್ಲ, ಕೆಲವು ಜನರು ತಮ್ಮ ಅನಾರೋಗ್ಯದ ಇತರೆ ಕಾರಣಗಳಿಗಾಗಿ ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲಾಗುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಕೋವಿಡ್ ಕೇಂದ್ರದಲ್ಲಿ ವೈದ್ಯರ ಜೊತೆಗೆ ರೋಬಟ್ ಬಳಸಿಕೊಳ್ಳಲು ಸಲಹೆ ನೀಡಿದರು.
ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು, ವಯಸ್ಸಾದವರು ಆದಷ್ಟು ಹೊರಗಡೆ ಬರುವುದನ್ನು ಕಡಿಮೆ ಮಾಡಬೇಕು, ಬೆಂಗಳೂರಲ್ಲಿ ಇತ್ತೀಚಿಗೆ ಕೋವಿಡ್ ಸೊಂಕಿತರು ಜಾಸ್ತಿಯಾಗಲು ಮುಖ್ಯವಾಗಿ ಊರಿಂದ ಊರಿಗೆ ತಿರುಗಾಡುವವರು ಕಾರಣ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಉಪಸ್ಥಿತರಿದ್ದರು.