ಧಾರವಾಡ: “ಪ್ರಶ್ನೆ ಪತ್ರಿಕೆ ಆಮಿಷ: ವಿದ್ಯಾರ್ಥಿಯಿಂದ 7.5 ತೊಲೆ ಚಿನ್ನ ದೋಚಿದ ಶಿಕ್ಷಕ; ನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ”- Exclusive Video
ಪ್ರಶ್ನೆ ಪತ್ರಿಕೆ ಆಮಿಷ: ವಿದ್ಯಾರ್ಥಿಯಿಂದ 7.5 ತೊಲೆ ಚಿನ್ನ ದೋಚಿದ ಶಿಕ್ಷಕ; ನೊಂದ ಬಾಲಕ ಆತ್ಮಹತ್ಯೆಗೆ ಯತ್ನ
ಧಾರವಾಡ: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪು ಚುಕ್ಕೆ ಹಚ್ಚುವಂತಹ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹತ್ತನೇ ತರಗತಿಯ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ, ಆತನ ಮನೆಯಿಂದ ಸುಮಾರು 7.5 ತೊಲೆ ಚಿನ್ನಾಭರಣಗಳನ್ನು ಶಿಕ್ಷಕನೋರ್ವ ವಸೂಲಿ ಮಾಡಿದ್ದು, ಇದರಿಂದ ಮನನೊಂದ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಗರದ ವಿದ್ಯಾರಣ್ಯ ಪ್ರೌಢಶಾಲೆಯ ಶಿಕ್ಷಕ ರಾಜಶೇಖರ ವಡಗೇರಿ ಎಂಬುವವರೇ ಈ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವವರು. ಆರೋಪಿ ಶಿಕ್ಷಕ ತನ್ನ ಮಗನ ಎಂಜಿನಿಯರಿಂಗ್ ವ್ಯಾಸಂಗದ ಶುಲ್ಕ ಭರಿಸಲು ವಿದ್ಯಾರ್ಥಿಯನ್ನು ದಾಳವಾಗಿ ಬಳಸಿಕೊಂಡಿರುವುದು ಆಘಾತ ಮೂಡಿಸಿದೆ.
ನಡೆದಿದ್ದೇನು?
ಹತ್ತನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿ ನೀಡುವುದಾಗಿ ಶಿಕ್ಷಕ ರಾಜಶೇಖರ್ ವಿದ್ಯಾರ್ಥಿಗೆ ಆಮಿಷವೊಡ್ಡಿದ್ದರು. ವಿದ್ಯಾರ್ಥಿಯ ಮನೆಯಲ್ಲಿ ಹಣವಿಲ್ಲದ ಕಾರಣ, ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ತರುವಂತೆ ಒತ್ತಾಯಿಸಿದ್ದರು. ಒಂದು ವೇಳೆ ಒಡವೆ ನೀಡದಿದ್ದರೆ ಪರೀಕ್ಷೆಗೆ ಕೂರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಹಂತ ಹಂತವಾಗಿ ನಡೆದ ಸುಲಿಗೆ:
- ಡಿಸೆಂಬರ್ 25, 2025: ಮರಾಠಾ ಕಾಲೋನಿಯ ಎಸ್ಬಿಐ ಬ್ಯಾಂಕ್ ಬಳಿ ವಿದ್ಯಾರ್ಥಿಯಿಂದ 2.5 ತೊಲೆ ಚಿನ್ನದ ಜಪ್ಲಹಾರ ಪಡೆದಿದ್ದಾರೆ.
- ಜನವರಿ 04, 2026: ಶಿವಾಜಿ ಸರ್ಕಲ್ ಬಳಿ ಮತ್ತೆ 5 ತೊಲೆ ತೂಕದ ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದಾರೆ.
ಜೀವ ಬೆದರಿಕೆ ಮತ್ತು ಆತ್ಮಹತ್ಯೆ ಯತ್ನ
ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಶಿಕ್ಷಕರು ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿದ್ದರು. ಇದರಿಂದ ತೀವ್ರವಾಗಿ ಭಯಗೊಂಡ ವಿದ್ಯಾರ್ಥಿ ಹಲವು ದಿನಗಳಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದನು. ಮನೆಯಲ್ಲಿ ಒಡವೆಗಳು ನಾಪತ್ತೆಯಾದ ಬಗ್ಗೆ ಪೋಷಕರು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಬೆದರಿಕೆಯಿಂದ ಕುಗ್ಗಿದ್ದ ವಿದ್ಯಾರ್ಥಿ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದು, ಸದ್ಯ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಾನೂನು ಕ್ರಮಕ್ಕೆ ಆಗ್ರಹ
ವಿದ್ಯಾರ್ಥಿಯ ತಾಯಿ ಸರೋಜಿನಿ ಕರಕಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ಸಲ್ಲಿಸಿದ್ದಾರೆ. “ತಕ್ಷಣವೇ ಆರೋಪಿ ಶಿಕ್ಷಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ನಮ್ಮ ಒಡವೆಗಳನ್ನು ಮರಳಿ ಕೊಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಇದೇ ಶಿಕ್ಷಕರು ಮತ್ತೊಬ್ಬ ವಿದ್ಯಾರ್ಥಿಯಿಂದ 10,000 ರೂ. ಹಣ ಪಡೆದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣವು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಶಿಕ್ಷಣ ಇಲಾಖೆಯು ಈ ‘ಬೆದರಿಕೆಕೋರ’ ಶಿಕ್ಷಕನ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
