ದಿಗ್ಗನಾಯಕನಭಾವಿ ಶಾಲಾ ಗ್ರಂಥಾಲಯಕ್ಕೆ ಸಾವಿರ ಪುಸ್ತಕ ದೇಣಿಗೆ..!

ರಾಯಚೂರು: ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರಮ ಬಿಂದು ಗ್ರಂಥಾಲಯಕ್ಕೆ ಬೆಂಗಳೂರಿನ IWCB ( ಇನ್ನರ್ ವ್ಹೀಲ್ ಕ್ಲಬ್ ಆಫ್ ಬೆಂಗಳೂರು ಹೆಚ್.ಬಿ.ಆರ್ )ಮಹಿಳಾ ತಂಡದವರು ಒಂದು ಸಾವಿರ ಪುಸ್ತಕಗಳನ್ನು ದೇಣಿಗೆ ನೀಡಿದ್ದಾರೆ ಎಂದು ಮುಖ್ಯ ಗುರುಗಳಾದ ವರದೇಂದ್ರ ತಿಳಿಸಿದರು.

ನಮ್ಮ ಶಾಲೆಯ ಮಕ್ಕಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕ/ಯುವತಿಯರಿಗೆ ಸದುಪಯೋಗವಾಗುವ ಅನೇಕ ಪುಸ್ತಕಗಳಿವೆ. ಅನೇಕ ಕಥೆ ಕವನಗಳ ಪುಸ್ತಕಗಳು ಇದ್ದು, ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತವೆ ಎಂಬ ಖುಷಿ ವಿಚಾರವನ್ನು ಶಿಕ್ಷಕ ಪರಮಾನಂದ ಹಂಚಿಕೊಂಡರು.
ದೇಣಿಗೆ ನೀಡಿದ ಮಹಿಳಾ ತಂಡದ ಅಧ್ಯಕ್ಷೆ ಸೌಂದರ್ಯ ನಾರಾಯಣ್, ಸಂಸ್ಥಾಪಕ ಅಧ್ಯಕ್ಷೆ ವೀಣಾ ಪ್ರಮೋದ್, ಕಾರ್ಯದರ್ಶಿ ಪದ್ಮಶ್ರೀ ರಮೇಶ್ ಸೇರಿದಂತೆ ಸಂಘದ ಸದಸ್ಯರಿಗೆ ಶಾಲೆಯ ವತಿಯಿಂದ ಗೌರವ ಸಲ್ಲಿಸಲಾಯಿತು.
ಸರಕಾರಿ ಶಾಲೆಗೆ ಉಪಯೋಗವಾಗುವ ಸಂಬಂಧ ದೂರದಿಂದ ಬಂದು ಅನುಕೂಲ ಮಾಡಿಕೊಟ್ಟ ಮಹಿಳಾ ಮಣಿಗಳಿಗೆ ಗ್ರಾಮಸ್ಥರು, ಚಿರಋಣಿಯಾಗಿದ್ದಾರೆ.