ಸಾರಿಗೆ ನಿಯಂತ್ರಕರ ಅಗಲಿಕೆ: ಕಣ್ಣೀರಾಗಿ ಸ್ಮರಿಸಿದ ಸಾರಿಗೆ ಸಿಬ್ಬಂದಿ
1 min read*ವಾಕರಸಾಸಂಸ್ಥೆ ಹುಬ್ಬಳ್ಳಿ ವಿಭಾಗ: ಅಕಾಲಿಕ ನಿಧನರಾದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರಿಗೆ ಗೌರವ ನಮನ*
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ
ನಿಜಗುಣಯ್ಯ ಬಿ ಹಿರೇಮಠ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಅವರ ಸೇವೆ ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು.
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ
ದಿವಂಗತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ವಿಭಾಗಿಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ನಿಜಗುಣಯ್ಯ ಬಿ ಹಿರೇಮಠರವರು ಸಾರಿಗೆ ಸಂಸ್ಥೆಯಲ್ಲಿ ಧೀರ್ಘಕಾಲ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ, ಸಾರಿಗೆ ನಿಯಂತ್ರಕರಾಗಿ ಪದೋನ್ನತಿ ಪಡೆದಿದ್ದರು. ಜಾತ್ರೆ ವಿಶೇಷ ಬಸ್ಸುಗಳ ಕಾರ್ಯಾಚರಣೆ ಸಮಯದಲ್ಲಿ ಮತ್ತು ಲಾಕ್ ಡೌನ್ ಅವಧಿಯಲ್ಲಿ ಯಾವುದೇ ರಜೆ ತೆಗೆದುಕೊಳ್ಳದೆ ಹೆಚ್ಚಿನ ಆಸಕ್ತಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಮಾಣಿಕ ಕರ್ತವ್ಯ ನಿರ್ವಹಣೆ, ಉತ್ತಮ ನಡೆ-ನುಡಿ ಹಾಗೂ ಸ್ವಭಾವದಿಂದ ಇತರರಿಗೆ ಮಾದರಿಯಾಗಿದ್ದರು ಎಂದು ದಿವಂಗತರ ಕಾರ್ಯತತ್ಪರತೆಯನ್ನು ಸ್ಮರಿಸಿದರು.
ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಮಾತನಾಡಿ ದಿವಂಗತರು ಹಳೇ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಸದಾ ಜಾಗೃತರಾಗಿದ್ದು ಯಾವುದೇ ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇಲಾಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದರು.
ಮೃತರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಸಹಾಯಕ ಸಂಚಾರ ಅಧೀಕ್ಷಕ ಐ.ಜಿ. ಮಾಗಾಮಿ, ಬಿ.ಕೆ. ನಾಗರಾಜು, ನಿಲ್ದಾಣಾಧಿಕಾರಿ, ಸಾರಿಗೆ ನಿಯಂತ್ರಕರುಗಳು ಹಾಗೂ ಚಾಲಕ-ನಿರ್ವಾಹಕರು ಇದ್ದರು.