ಸಂತೋಷ ಲವ್ಸ್ ಬಾಗಮ್ಮ: ಯಾದಗಿರಿಯಲ್ಲೊಂದು ‘ರಾಜಾಹುಲಿ’ ರಿಯಲ್ ಸ್ಟೋರಿ

ಯಶ ಅಭಿನಯದ ರಾಜಾಹುಲಿ ಸಿನೇಮಾದಲ್ಲೂ ನಟ ಪ್ರೀತಿಸಿದ್ದ ಹುಡುಗಿಯನ್ನ ಮದುವೆಯಾಗಲು ಮುಂದಾದಾಗ ಗೆಳೆಯರೇ ಕರೆದುಕೊಂಡು ಹೋಗಿ ಕೊಲೆ ಮಾಡುವ ಯತ್ನ ಮಾಡಿರೋ ಥರಾನೇ, ಇಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ
ಯಾದಗಿರಿ: ಪ್ರೀತಿಯ ವಿಷಯ ಹುಡುಗಿಯ ಕುಟುಂಬಸ್ಥರಿಗೆ ತಿಳಿದು, ಯುವಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ನಗರದ ಹೊರ ವಲಯದಲ್ಲಿ ನಡೆದಿದೆ.
ಶಹಾಪುರ ನಗರದ ಆಶ್ರಯ ಕಾಲೋನಿಯ ಮೈನಾರಿಟಿ ಹಾಸ್ಟೆಲ್ ಬಳಿ ಘಟನೆ ನಡೆದಿದೆ. ಶಹಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಸಂತೋಷ್ (22) ಮೃತ ಯುವಕನೆಂದು ಗುರುತಿಸಲಾಗಿದೆ. ಮೃತ ಸಂತೋಷ ಅದೇ ಗ್ರಾಮದ, ತಮ್ಮದೇ ಜಾತಿಯ ಬಾಗಮ್ಮ ಎಂಬುವ ಯುವತಿಯನ್ನು ಪ್ರಿತಿಸುತ್ತಿದ್ದ. ಈ ಇಬ್ಬರ ಪ್ರೀತಿ ವಿಚಾರ ಬಾಗಮ್ಮನ ಮನೆಯವರಿಗೆ ತಿಳಿದಿತ್ತು. ಹೀಗಾಗಿ ಬಾಗಮ್ಮನ ಸಂಬಂಧಿ ಬಾಗಪ್ಪ ಎಂಬುವಾತ ಮತ್ತು ಆತನ ಸ್ನೇಹಿತರು ಸಂತೋಷನ್ನನ್ನು ಮಾತುಕತೆಗೆಂದು ಶಹಪುರಕ್ಕೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ಬಾಗಪ್ಪ ಮತ್ತು ಆತನ ಸ್ನೇಹಿತರು ಸಂತೋಷ್ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಅನುಮಾನಿಸಲಾಗಿದೆ. ಸದ್ಯ ಸಂತೋಷ್ ಮೃತ ದೇಹ ಶಹಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆ ಮುಂದೆ ಸಂತೋಷನ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ಕೈಗೊಂಡಿದ್ದು, ಕೊಲೆಯಾದವನ ಜೊತೆಗೆ ಹೋದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.