Posts Slider

Karnataka Voice

Latest Kannada News

ಧಾರವಾಡ, ಹುಬ್ಬಳ್ಳಿ ಪೊಲೀಸರಿಗೆ “ತಾಕೀತು” ಮಾಡಿದ ಸಚಿವ ಸಂತೋಷ ಲಾಡ್…

Spread the love

ಸಂಘಟಿತ ಅಪರಾಧ ಕೃತ್ಯ ಮತ್ತು ಮಾಧಕ ವಸ್ತುಗಳ ನಿಯಂತ್ರಣಕ್ಕೆ ಕಠಿಣ ಪೊಲೀಸ್ ಕ್ರಮ ಅಗತ್ಯ

ಸುಗಮ ಸಂಚಾರ, ಶಾಂತಿ, ಸುವ್ಯವಸ್ಥೆಗೆ ಜಿಲ್ಲೆ ಇತರರಿಗೆ ಮಾದರಿಯಾಗಲಿ

ಸಚಿವ ಸಂತೋಷ ಲಾಡ್ ಖಡಕ್ ಎಚ್ಚರಿಕೆ

ಧಾರವಾಡ: ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಘಟಿತ ಅಪರಾಧ ಕೃತ್ಯಗಳನ್ನು ತಡೆಗಟ್ಟಿ ಇದರಲ್ಲಿ ಭಾಗವಹಿಸುವ ಮತ್ತು ಪ್ರೇರೆಪಿಸುವ ದುಷ್ಟ ವ್ಯಕ್ತಿ, ಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಆಯೋಜಿಸದ್ದ ಪೊಲೀಸ್, ಅಬಕಾರಿ, ರಾಷ್ಟ್ರೀಯ ಹೆದ್ದಾರಿ, ಲೋಕೋಪೋಯೋಗಿ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ, ಪ್ರಗತಿ ಪರಿಶೀಲನೆ ಮಾಡಿ, ಮಾತನಾಡಿದರು.

ವೀಡಿಯೋ ಇಲ್ಲಿದೆ…

ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಜನ ಸ್ನೇಹಿಯಾಗಿ ವರ್ತಿಸಬೇಕು ಎಂದು ಹೇಳಿದರು.
ಯುವ ಸಮೂಹವನ್ನು ಗುರಿಯಾಗಿಸಿಕೊಂಡು ಮಾಧಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಗಮನ ಹರಿಸಿ ಇಂತಹ ಕೃತ್ಯಗಳಲ್ಲಿ ಭಾಗವಹಿಸುವವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಮಾಧಕ ವಸ್ತುಗಳ ಬಳಕೆಯಿಂದ ಆಗುವ ಹಾನಿ ಹಾಗೂ ಅಪರಾಧ ಕೃತ್ಯದ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿದರು.
ಅವಳಿ ನಗರದಲ್ಲಿ ನೂರಾರಕ್ಕೂ ಹೆಚ್ಚು ಕಾಲೇಜುಗಳಿವೆ. ಇಂಜಿನಿಯರಿಂಗ್, ಡೆಂಟಲ್, ವೈದ್ಯಕೀಯ, ಕಾಲೇಜುಗಳ ಸುತ್ತಮುತ್ತ ಹಾಗೂ ಹಾಸ್ಟೆಲ್‍ಗಳಲ್ಲಿ ಮಫ್ತಿಯಲ್ಲಿ ಹಾಗೂ ಅನಿರೀಕ್ಷಿತ ಬೇಟಿ ಕೈಗೊಂಡು ಅಪರಾಧ ಕೃತ್ಯಗಳ ಬಗ್ಗೆ ತೀವ್ರನಿಗಾ ವಹಿಸಬೇಕು. ಯುವ ಪೀಳಿಗೆ ದಾರಿ ತಪ್ಪದಂತೆ ಪೆÇಲೀಸ್ ಇಲಾಖೆ ಪ್ರಬಲ ಅಸ್ತ್ರವಾಗಬೇಕೆಂದರು. ಇಂದಿನ ಈ ಸಭೆಯು ಸಲಹಾತ್ಮಕ ಮಾರ್ಗದರ್ಶಿ ಸಭೆಯಾಗಿದ್ದು, ಮುಂಬರುವ ದಿನಗಳಲ್ಲಿ ಪೆÇಲೀಸ್ ಇಲಾಖೆಯ ಅಧಿಕಾರಿಗಳು ಡ್ರಗ್ಸ್, ಸಂಘಟಿತ ಅಪರಾಧ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರತ್ಯಕ ಸಭೆ ಜರುಗಿಸುವುದಾಗಿ ಸಚಿವರು ತಿಳಿಸಿದರು.
ಅಬಕಾರಿ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಮಕ್ಕಳು ಮಧ್ಯ ಮಾರಾಟ ಹಾಗೂ ಸೇವನೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಮಧ್ಯ ಮಾರಾಟ ಲೈಸನ್ಸ್‍ದಾರರು ಕಾನೂನು ಬಾಹಿರವಾಗಿ ಮಧ್ಯ ಮಾರಾಟ ಮಾಡುವುದು ಬೇಡ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಬಕಾರಿ ಅಧಿಕಾರಿಗಳು ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಲೈಸನ್ಸ್ ರದ್ದು ಪಡಿಸಲು ಕ್ರಮ ವಹಿಸಬೇಕೆಂದು ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಸಂಘಟಿತ ಅಪರಾಧಗಳನ್ನು ತಡೆಯಬೇಕು. ಮಾಧಕ ವಸ್ತುಗಳ ಮಾರಾಟವನ್ನು ನಿಯಂತ್ರಿಸಬೇಕು. ಮತ್ತು ಅವಳಿನಗರದ ಸಂಚಾರ ವ್ಯವಸ್ಥೆ ಸುಗಮವಾಗಬೇಕು. ಅದಕ್ಕೆ ಬೇಕಾದ ಸಂಪೂರ್ಣವಾದ ಸಹಕಾರವನ್ನು ನಮ್ಮ ಕಡೆಯಿಂದ ನೀಡಲಾಗುವುದು ಎಂದರು. ಈ ಕಾರ್ಯಗಳನ್ನು ಅಧಿಕಾರಿಗಳು ಬರಿ ಕರ್ತವ್ಯವೆಂದು ಭಾವಿಸದೆ, ಹೃದಯದಿಂದ ನಮ್ಮ ಜಿಲ್ಲೆ ಅಭಿಮಾನದಿಂದ ಮಾಡುವ ಮೂಲಕ ಇತರ ಜಿಲ್ಲೆಗಳಿಗೆ ಧಾರವಾಡ ಜಿಲ್ಲೆ ಮಾದರಿ ಜಿಲ್ಲೆಯಾಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ವಿನಂತಿಸಿದರು. ಮುಂದಿನ ದಿನಗಳಲ್ಲಿ ಅಪರಾಧ ಹಾಗೂ ಮಾಧಕ ವಸ್ತುಗಳ ನಿಯಂತ್ರಣವಾಗದಿದ್ದರೆ ಸಂಭಂದಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಮಧ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಿ, ಹಲವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ಹಾಗೂ ಮಹಾನಗರ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಗಸ್ತು ಹೆಚ್ಚಿಸಲಾಗಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಚಾರಿ ವ್ಯವಸ್ಥೆ ಸುಧಾರಣೆಗೆ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಮಹಾನಗರ ಪೊಲೀಸ್ ಆಯುಕ್ತ ಸಂತೋಷ ಬಾಬು ಅವರು ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವ ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಟ್ ವ್ಯವಸ್ಥೆಯನ್ನು ಬಿಗಿಗೊಳಿಸಿ, ಪ್ರತಿ ಪೊಲೀಸ್ ಸಿಬ್ಬಂದಿ ತನಗೆ ನೀಡಿರುವ ಬಿಟ್‍ದಲ್ಲಿ ಸಮಗ್ರ ಅವಲೋಕನ ಮಾಡಿ, ಕಡ್ಡಾಯವಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.
ಮಹಾನಗರದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಇಲಾಖೆಯಿಂದ ಸಾಕಷ್ಟು ಮಾಹಿತಿ ನೀಡಿ, ಜಾಗೃತಿಗೊಳಿಸಲಾಗಿದೆ. ಆದರೂ ವಿವಿಧ ರೀತಿಯ ಆಮಿಷಗಳಿಗೆ ಒಳಗಾಗಿ ಹಣ, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ಜರುಗಿದ ತಕ್ಷಣ ಮಾಹಿತಿ ನೀಡಿದರೆ, ಪ್ರಕರಣ ಬೇಧಿಸಿ, ಅಪರಾಧಿಗಳನ್ನು ಪತ್ತೆಹಚ್ಚಬಹುದು ಮತ್ತು ಸ್ವತ್ತು ರಕ್ಷಿಸಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪೊಲೀಸ್ ಸಂಚಾರ ತೀವ್ರಗೊಳಿಸಲಾಗಿದೆ. ಅಪರಾಧ ಘಟಿಸಿದ ತಕ್ಷಣ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ ತಕ್ಷಣ ಸ್ಪಂಧಿಸಲಾಗುತ್ತಿದೆ. ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದನ್ನು ತಡೆಯಲು ಅಬಕಾರಿ ಇಲಾಖೆಯೊಂದಿಗೆ ಜಂಟಿ ದಾಳಿ ಮಾಡಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೆದ್ದಾರಿ ವಿಸ್ತೀರ್ಣ, ಕೆಳ ಸೇತುವೆಗಳ ನಿರ್ಮಾಣ ಮತ್ತು ಹೆದ್ದಾರಿ ಪಕ್ಕದ ಗ್ರಾಮಗಳ ಸಂಪರ್ಕ ರಸ್ತೆ ನಿರ್ಮಿಸುವ ಮೂಲಕ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಉಪ ಪೊಲೀಸ್ ಆಯುಕ್ತ ಡಾ.ಗೊಪಾಲ ಬ್ಯಾಕೋಡ್ ಅವರು ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ 2023ರ ಇಲ್ಲಿಯವರೆಗೆ 74 ವಿವಿಧ ರೀತಿಯ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 33 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಮತ್ತು ಉಳಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ್ ಉಳ್ಳಾಗಡ್ಡಿ, ಅಬಕಾರಿ ಇಲಾಖೆ ಉಪ ಆಯುಕ್ತ ಕೆ.ಪ್ರಶಾಂತಕುಮಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶಶಿಧರ ಚನ್ನಪ್ಪ ಗೌಡರ, ವಿಶ್ವಜ್ಞ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಪೊಲೀಸ್, ಅಬಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *