ಅರ್ಥಗರ್ಭಿತ ಸಹಾಯಕ್ಕೆ ನಿಂತ ಸಂಡೂರು ಧಣಿ: ಕಲಘಟಗಿ ಕ್ಷೇತ್ರದ ಮನೆ ಮನೆಗೂ ತಲುಪಲಿದೆ ಗಂಗಾವತಿ ಅಕ್ಕಿ…!

ಧಾರವಾಡ: ಮಾಜಿ ಸಚಿವ ಹಾಗೂ ಕಲಘಟಗಿ ಮತ ಕ್ಷೇತ್ರದ ಮಾಜಿ ಶಾಸಕ ಸಂತೋಷ್ ಲಾಡ್ ಅವರು ತಮ್ಮನ್ನು ಎರಡು ಬಾರಿ ಗೆಲ್ಲಿಸಿದ್ದ ಕಲಘಟಗಿ ಜನರ ಕಷ್ಟಕ್ಕೆ ತುಂಬ ಅರ್ಥಗರ್ಭಿತವಾಗಿ ಸ್ಪಂದಿಸಿದ್ದಾರೆ.
ಸದ್ಯ ತಾವೊಬ್ಬ ಚುನಾಯಿತ ಪ್ರತಿನಿಧಿಯಲ್ಲದಿದ್ದರೂ ಸಹ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಆರಂಭಿಕ ಸಮಯದಲ್ಲೇ ಕಲಘಟಗಿ ಕ್ಷೇತ್ರದ ಜನತೆಗೆ ಒಂದು ಆರೋಗ್ಯ ಸಹಾಯವಾಣಿ ನಿರ್ಮಿಸಿದ್ದರು. ಈ ಸಹಾಯವಾಣಿ ಮೂಲಕ ನಿತ್ಯ ನೂರಾರು ಜನ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲೆಯ ಪ್ರತಿಷ್ಠಿತ ವೈದ್ಯರು ದೂರವಾಣಿ ಮೂಲಕ ಪರಿಹಾರ ನೀಡುತ್ತಿದ್ದಾರೆ.

ಈಗ ಲಾಡ್ ಅವರು ತಾವೇ ಕೈಯ್ಯಿಂದ ಸುಮಾರು 1.50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕಲಘಟಗಿ ಮತಕ್ಷೇತ್ರದ ಪ್ರತಿ ಮನೆಗಳಿಗೆ ದಿನಸಿ ವಸ್ತುಗಳ ಕಿಟ್ ನೀಡಲಿದ್ದಾರೆ.
ಈ ಮೂಲಕ ರಾಜ್ಯದ ಯಾವುದೇ ಚುನಾಯಿತ ಪ್ರತಿನಿಧಿಯಿಂದಲೂ, ಮಂತ್ರಿಗಳಿಂದಲೂ ಸಾಧ್ಯವಾಗದ ವಿನೂತನ ಹಾಗೂ ಅಮೂಲ್ಯವಾದ ಸೇವೆಯನ್ನು ಸಂತೋಷ್ ಲಾಡ್ ಅವರು ತನ್ನ ಕರ್ಮಭೂಮಿ ಕಲಘಟಗಿ ಕ್ಷೇತ್ರದ ಜನತೆಗೆ ನೀಡಿ ಕ್ಷೇತ್ರದ ಜನರಿಗಾಗಿ ಮಿಡಿದಿದ್ದಾರೆ.
ನೆನಪಿರಲಿ ಈ ವರೆಗೆ ರಾಜ್ಯದ ಯಾವುದೇ ಚುನಾಯಿತ ಪ್ರತಿನಿಧಿಗಳಾಗಲೀ, ಮಹಾನ್ ನಾಯಕರಾಗಲಿ ಇಷ್ಟು ದೊಡ್ಡ ಮಟ್ಟದಲ್ಲಿ ವೈಯುಕ್ತಿಕ ಹಣದಲ್ಲಿ ತನ್ನ ಕ್ಷೇತ್ರದ ಜನತೆಗೆ ಸಹಾಯಹಸ್ತ ಚಾಚಿದ ಉದಾಹರಣೆಯಿಲ್ಲ ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ (NWKSRTC) ಯ ಮಾಜಿ ನಿರ್ದೇಶಕ ಹಾಗೂ ಸಂತೋಷ್ ಲಾಡ್ ಅವರ ಆಪ್ತ ಆನಂದ್ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.