ಶಿಕ್ಷಕರು ಮನುಷ್ಯರೇ.. ಭಯದ ಒತ್ತಡ ಹಾಕಬೇಡಿ..: ಅಧಿಕಾರಿಗಳೇ ಹೀಗೇಕೆ ನೀವೂ..!
1 min readಧಾರವಾಡ: ವಿದ್ಯಾಗಮ ಯೋಜನೆಯನ್ನ ಸುಂದರವಾಗಿ ನಿಭಾಯಿಸುತ್ತಿರುವ ಶಿಕ್ಷಕರ ಬಗ್ಗೆ ಉನ್ನತ ಅಧಿಕಾರಿಗಳು ಶ್ಲಾಘಿಸುತ್ತಿದ್ದಾರೆ. ಆದರೆ, ಕೆಳ ಹಂತದ ಕೆಲವು ಅಧಿಕಾರಿಗಳು ಒತ್ತಡ ಹಾಕುತ್ತಿರುವುದನ್ನ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಹುಬ್ಬಳ್ಳಿ ವಿನಂತಿಸಿದೆ.
ಈ ಬಗ್ಗೆ ಕೆಲವು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಪ್ರಧಾನ ಕಾರ್ಯರ್ಶಿ ಮಲ್ಲಿಕಾರ್ಜುನ ಉಪ್ಪಿನ, ಕೊರೋನಾ ವೈರಸ್ ನಿಂದ ಶಿಕ್ಷಕರು ಆತಂಕ ಭಯದಲ್ಲಿ ದಿನಗಳನ್ನ ಕಳೆಯುತ್ತಿದ್ದಾರೆ. ಸರಕಾರ ನೀಡಿದ ಕಾರ್ಯವನ್ನ ಚಾಚು ತಪ್ಪದೇ ಪಾಲನೆ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ವಿದ್ಯಾಗಮ ಯೋಜನೆ ಉತ್ತಮವಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಉನ್ನತ ಅಧಿಕಾರಿಗಳು ಶಿಕ್ಷಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಸಮಯದಲ್ಲೂ ಕೆಳ ಹಂತದ ಕೆಲವು ಅಧಿಕಾರಿಗಳು ಸುಖಾಸುಮ್ಮನೆ ಒತ್ತಡ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಶಿಕ್ಷಕರು ಕೂಡಾ ಮನುಷ್ಯರೇ, ಅವರನ್ನ ಆತಂಕದಲ್ಲಿ ದೂಡಿ, ಮತ್ತಷ್ಟು ಭರವಸೆಯನ್ನ ಕಳೆದುಕೊಳ್ಳುವಂತೆ ಮಾಡುವುದು ಸೂಕ್ತವಲ್ಲ ಎಂದು ಸಂಘ ಅಭಿಪ್ರಾಯಪಟ್ಟಿದೆ.
ವಿದ್ಯಾಗಮ ಯೋಜನೆಯಲ್ಲಿ ಭಾಗಿಯಾಗುವ ಶಿಕ್ಷಕರೊಂದಿಗೆ ಚೆನ್ನಾಗಿ ನಡೆದುಕೊಳ್ಳಿ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶಿಕ್ಷಕ ವಲಯದಲ್ಲೂ ಚಿಂತೆಯಿದೆ. ಅದನ್ನ ಅರ್ಥ ಮಾಡಿಕೊಂಡೇ ಯೋಜನೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಕೆಲವರಿಗೆ ತಿಳಿದರಲಿ ಎಂದು ಸಂಘ ಕೋರಿದೆ.