26ಗಂಟೆಯಿಂದ ನಿರಂತರ ಕೆಲಸ : ಪಿಎಸ್ಐ ಮಹೇಂದ್ರಕುಮಾರ ಗುಡ್ ಜಾಬ್ ..!
1 min readಧಾರವಾಡ: ಆ ಅಧಿಕಾರಿ ಕಳೆದ 26 ಗಂಟೆಯಿಂದಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೂತಲ್ಲಿ ಕೂಡುವುದಕ್ಕೂ, ನಿಂತಲ್ಲಿ ನಿಲ್ಲುವುದಕ್ಕೂ ಆಗುತ್ತಿಲ್ಲ. ಇಲ್ಲಿ ಇರಲೇಬೇಕು ಎಂದುಕೊಂಡಾಗಲೇ, ಅಲ್ಲಿಗೂ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಹಾಗಾಗಿಯೇ, ಆ ಅಧಿಕಾರಿ ಕಳೆದ 26 ಗಂಟೆಯಿಂದಲೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಹೌದು.. ನಾನು ಹೇಳಲು ಹೊರಟಿರುವುದು ಧಾರವಾಡ ಗ್ರಾಮೀಣ ಠಾಣೆಯ ಪಿಎಸ್ಐ ಮಹೇಂದ್ರಕುಮಾರ ಬಗ್ಗೆ. ನಿನ್ನೆ ಬೆಳಗಿನ ಜಾವ ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದ ಸುದ್ದಿ ಗೊತ್ತಾದ ತಕ್ಷಣದಿಂದ ಈಗಿನವರೆಗೆ ಅವರು, ನಿದ್ದೆಯನ್ನೂ ಮಾಡದೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ದಾವಣಗೆರೆ ಮೂಲದ ಮಹಿಳೆಯರೇ ಹೆಚ್ಚಾಗಿದ್ದ ವಾಹನದಲ್ಲಿ ರಕ್ತಸಿಕ್ತವಾಗಿದ್ದ ದೇಹಗಳನ್ನ ಹೊರಗೆ ತೆಗೆದು ಅವುಗಳನ್ನ ಸಾಗಿಸುವುದೇ ದೊಡ್ಡದೊಂದು ಸಾಹಸ ಮಾಡಿದಂತಾಗಿತ್ತು. ಅದನ್ನೇಲ್ಲ ಮಾಡುವಾಗ ಎಲ್ಲ ಸಿಬ್ಬಂದಿಗಳನ್ನ ಹುರಿದುಂಬಿಸಿ, ಟೋಚಿಂಗ್ ಮಾಡುವವರನ್ನ ಕರೆದು, ಎಲ್ಲರನ್ನೂ ಗುಡ್ಡೆ ಹಾಕಿ ಕೆಲಸ ಮುಗಿಸಿದ್ದರು.
ಅದಾದ ನಂತರ ಬೇರೆಯದ್ದೇ ಸಮಸ್ಯೆಗಳು ತಲೆದೋರತೊಡಗಿದವು. ತೀರಿಕೊಂಡವರು ಯಾರೂ, ಎಲ್ಲಿಗೆ ಹೊರಟಿದ್ದವರು, ಮೊದಲು ಮೃತಪಟ್ಟವರು ಯಾರೂ.. ಮಾಹಿತಿಯನ್ನ ಪಡೆಯುವುದು ಸಣ್ಣ ಕೆಲಸವಲ್ಲ. ನಡು ನಡುವೆ ಅಪಘಾತದಲ್ಲಿ ತೀರಿಕೊಂಡವರ ಸಂಬಂಧಿಕರು, ‘ಸರ್, ಅವರು ತೀರಿಕೊಂಡಿದ್ದಾರಾ… ಇವರು ಅರಾಮ್ ಇದ್ದಾರಲ್ಲಾ.. ‘ ಎಂದು ಕೇಳುತ್ತಿದ್ದರು. ಎಲ್ಲರನ್ನೂ ಸರಿಯಾಗಿಯೇ ನಿಭಾಯಿಸಿಕೊಂಡು ಮುನ್ನಡೆದದ್ದು ಪಿಎಸ್ಐ ಮಹೇಂದ್ರಕುಮಾರ.
ಹಾಗೋ ಹೀಗೋ ಎಲ್ಲವೂ ಸರಿಯಾಯಿತು ಎನ್ನುವುದರಲ್ಲಿ ಶವಗಳೇ ಅದಲಿ-ಬದಲಿಯಾಗಿದ್ದವು. ಮತ್ತೆ ಇವರನ್ನ ಕರೆದುಕೊಂಡು ಹೋಗಿ, ಶವವನ್ನ ತೆಗೆದುಕೊಂಡು ಹೋದವರನ್ನ ಕರೆತಂದು ಶವಗಳನ್ನ ಹಸ್ತಾಂತರ ಮಾಡಲಾಯಿತು. ಎಲ್ಲ ಹಿರಿಯ ಅಧಿಕಾರಿಗಳಿಗೂ ನಿರಂತರ ಮಾಹಿತಿ ರವಾನೆ ಮಾಡುತ್ತಲೇ, ಎಲ್ಲವನ್ನೂ ಮಾಡಿ ಮುಗಿಸಿದ್ದು ಪಿಎಸ್ಐ ಮಹೇಂದ್ರಕುಮಾರ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯುತ್ತಲೇ ಅಳಿದುಳಿದ ಕೆಲಸಗಳನ್ನ ಮಾಡುತ್ತಿದ್ದಾಗಲೇ, ಮತ್ತೆ ಪೊಲೀಸ್ ಠಾಣೆಯಿಂದ ಮತ್ತೊಂದು ಕಾಲ್ ಬಂತು.. ‘ಸರ್, ಮಾವಿನಕೊಪ್ಪದ ಹಂತ್ಯೇಕ್ ಮತ್ತೊಂದು ಎಕ್ಸಿಡೆಂಟ್ ಆಗೇತ್ರೀ’… ಪಿಎಸ್ಐ ಮಹೇಂದ್ರಕುಮಾರ ಅಲ್ಲಿಗೆ ಹೊರಟು ನಿಂತರು..
ಇಂತಹ ಅಧಿಕಾರಿಗಳು ನಮ್ಮ ನಡುವೆ ಇರುವುದೇ ಹೆಮ್ಮೆಯ ವಿಷಯ. ಬೇರೆ ಯಾವುದೋ ವಿಷಯಗಳ ಬಗ್ಗೆ ಆರೋಪ ಮಾಡುವುದು, ಹೀಗೆಳುವುದು ಇದ್ದಿದ್ದೇ. ಆದರೆ, ಉತ್ತಮ ಕೆಲಸ ಮಾಡಿದಾಗ, ಗುಡ್ ಜಾಬ್ ಸರ್.. ಎಂದು ಹೇಳದೇ ಇರುವುದು ಕೂಡಾ ಒಳ್ಳೆಯದಲ್ಲ. ಎನಿ ವೇ ಮಹೇಂದ್ರಕುಮಾರ ಸರ್, ಒಳ್ಳೆಯ ಕೆಲಸ ಮಾಡಿದ್ರೀ.. ನಿಮ್ಮ ಕರ್ತವ್ಯ ಬದ್ಧತೆಗೆ ನಮ್ಮದೊಂದು ಸಲಾಮ್..