”ಒಬ್ಬರಿಗೆ ಸ್ವಾಗತ, ಮತ್ತೊಬ್ಬರಿಗೆ ಗೌರವದ ಬೀಳ್ಕೊಡುಗೆ: ಶಹರ ಠಾಣೆಯಲ್ಲಿ ಅಧಿಕಾರಿಗಳ ಹಸ್ತಾಂತರದ ಸಂಭ್ರಮ!”
ಧಾರವಾಡ: ನಗರದ ಶಹರ ಪೊಲೀಸ್ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿ ಗುರುನಾಥ ಚವ್ಹಾಣ್ ಅವರು ಅಧಿಕಾರ ಸ್ವೀಕರಿಸಿದರು. ಠಾಣೆಯಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಸಿಸಿಬಿಯಲ್ಲಿದ್ದುಕೊಂಡು ಕಳೆದ ಕೆಲವು ದಿನಗಳಿಂದ ಶಹರ ಠಾಣೆಯ ಇನ್ಚಾರ್ಜ್ ಇನ್ಸ್ಪೆಕ್ಟರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಅಲಿ ಶೇಖ್ ಅವರು ನೂತನ ಇನ್ಸ್ಪೆಕ್ಟರ್ಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಲಿ ಶೇಖ್ ಅವರ ಸೇವೆಯನ್ನು ಸ್ಮರಿಸಿ, ಅವರಿಗೆ ಪೊಲೀಸ್ ಸಿಬ್ಬಂದಿ ವರ್ಗದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅಲಿ ಶೇಖ ಅವರು ವಿಜಯಪುರ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಎಸಿಪಿ ಪ್ರಶಾಂತ್ ಸಿದ್ಧನಗೌಡರ ಅವರು ಉಪಸ್ಥಿತರಿದ್ದು, ಇಬ್ಬರೂ ಅಧಿಕಾರಿಗಳಿಗೆ ಶುಭ ಹಾರೈಸಿದರು. ಕರ್ತವ್ಯ ನಿಷ್ಠೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಬಗ್ಗೆ ಅಧಿಕಾರಿಗಳು ಈ ವೇಳೆ ಚರ್ಚಿಸಿದರು.
ಸಮಾರಂಭದಲ್ಲಿ ಶಹರ ಠಾಣೆಯ ಎಲ್ಲಾ ಉಪನಿರೀಕ್ಷಕರು (PSI), ಸಹಾಯಕ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು ನೂತನ ಅಧಿಕಾರಿಯನ್ನು ಸ್ವಾಗತಿಸಿದರು.
