ಗರಗ ಠಾಣೆಯ ಮೃತ ಪೇದೆಯ ಕುಟುಂಬಕ್ಕೆ “ವೀರೇಶ ಉಂಡಿ” ಸಹಾಯ ಹಸ್ತ…
1 min readಹುಬ್ಬಳ್ಳಿ: ಮನುಷ್ಯತ್ವ ಹಾಗೂ ಮಾನವೀಯತೆಯಿಂದಲೇ ಮಾತ್ರ ಬದುಕು ಸಾರ್ಥಕತೆ ಕಾಣಲು ಸಾಧ್ಯ ಎಂಬ ಉಕ್ತಿಯಂತೆ ವಿಧಿ ಅಟ್ಟಹಾಸದಲ್ಲಿ ಹೆತ್ತ ಕರುಳ ಕುಡಿಯನ್ನು ಕಳೆದುಕೊಂಡ ವೃದ್ದ ತಂದೆ ತಾಯಿ ಹಾಗೂ ಕುಟುಂಬಕ್ಕೆ ಶ್ರೀ ದುರ್ಗಾ ಡೆವಲಪರ್ಸ ಹಾಗೂ ಪ್ರಮೋಟರ್ಸ ಆರ್ಥಿಕ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದೆ.
ಇಡೀ ಕುಟುಂಬಕ್ಕೆ ಒಪ್ಪತ್ತಿನ ಗಂಜಿಗೆ ಆಧಾರವಾಗಿದ್ದ ಗರಗ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ
ಕರ್ತವ್ಯ ನಿರ್ವಹಿಸುತ್ತಿದ್ದ ಹುಚ್ಚೇಶ ಮಲ್ಲಣ್ಣವರ, ಇತ್ತೀಚಿಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡು ಉಪಚಾರ ಫಲಿಸದೇ ಸಾವನ್ನಪ್ಪಿದ್ದರು.
ಛಬ್ಬಿ ಗಣೇಶೋತ್ಸವದಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಮರಳುವಾಗ ಸಂಭವಿಸಿದ್ದ ಈ ಭೀಕರ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ವೃದ್ದ ಪಾಲಕರಿಗೆ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂತೈಸಲು ಯತ್ನಿಸಿದರಾದರೂ, ಮಗನನ್ನು ಕಳೆದುಕೊಂಡ ಪಾಲಕರ ರೋಧನ ಕಲ್ಲು ಹೃದಯವನ್ನು ನೀರಾಗಿಸುವಂತಿತ್ತು.
ಈ ದೃಶ್ಯಾವಳಿ ಟಿವಿ ವಾಹಿನಿಗಳು ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದನ್ನು ಗಮನಿಸಿದ ಶ್ರೀ ದುರ್ಗಾ ಡೆವಲಪರ್ಸ ಮತ್ತು ಪ್ರಮೋಟರ್ಸ ನ ಎಂಡಿ ವೀರೇಶ ಉಂಡಿ, ತಮ್ಮ ಸಂಸ್ಥೆಯಿಂದ ನೊಂದ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕೆಂದು ನಿಶ್ಚಿಯಿಸಿ, ಮೃತ ಪೊಲೀಸ್ ಸಿಬ್ಬಂದಿಯ ಕುಟುಂಬವನ್ನು ಸಂಪರ್ಕಿಸಿ, ಗುರುವಾರ ಬೆಳಗ್ಗೆ ನೊಂದ ಕುಟುಂಬದ ಸದಸ್ಯರೆಲ್ಲರನ್ನೂ ಸಂಸ್ಥೆಯ ಕಚೇರಿಗೆ ಕರೆಯಿಸಿಕೊಂಡು, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಸಮ್ಮುಖದಲ್ಲಿ 50 ಸಾವಿರ ರೂ. ಗಳ ನೀಡಿ ಸಂತೈಸುವ ಮೂಲಕ ಸಮಾಜದಲ್ಲಿ ಮನುಷ್ಯತ್ವ ಹಾಗೂ ಮಾನವೀಯತೆಗೆ ಸಾವಿಲ್ಲ ಎಂಬ ಸಂದೇಶ ಸಾರಿದ್ದು ಯುವ ಜನಾಂಗಕ್ಕೆ ಅತ್ಯುತ್ತಮ ಸಂದೇಶ ಸಾರಿದಂತಾಗಿದೆ.
ಯುವ ಉದ್ಯಮಿಯಾಗಿರುವ ವೀರೇಶ ಉಂಡಿ, ಜಾತಿ ಮತ ಭೇದ ಎಣಿಸದೇ ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಸಾಗಿದ್ದು, ಇದೀಗ ಮೃತ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಆರ್ಥಿಕ ಸಹಾಯ ಕಲ್ಪಿಸಿದ್ದು ಸಮಸ್ತ ಪೊಲೀಸ್ ಇಲಾಖೆ ಮಾತ್ರವಲ್ಲದೆ, ಧಾರವಾಡ ಜಿಲ್ಲೆಯ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಮೃತ ಪೊಲೀಸ್ ಸಿಬ್ಬಂದಿಯ ವೃದ್ದ ತಂದೆ ತಾಯಿಗಳಾದ ನೀಲವ್ವ, ಹನಮಂತ, ಸಂಸ್ಥೆಯ ಎಚ್ ಆರ್ ಮ್ಯಾನೇಜರ್ ಸದ್ದಾಂ ಮುಲ್ಲಾ, ಶೋಭಾ ಕಡಬಾಳ, ಅಶ್ವಿನಿ ಚಂದ್ರಾಪಟ್ಟಣ, ಬಿ.ಕೆ. ಮಹೇಂದ್ರ ಉಪಸ್ಥಿತರಿದ್ದರು.