ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮುಖ್ಯ ಶಿಕ್ಷಕಿ…!

ಬೀದರ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಒಳ್ಳೆಯ ಸಂಸ್ಕಾರ ನೀಡುವ ಜೊತೆಗೆ ಶಾಲೆಯ ಕೀರ್ತಿಯನ್ನ ಶ್ರೀಮಂತಗೊಳಿಸಿದ್ದ ಔರಾದ ತಾಲೂಕಿನ ಯನಗುಂದಾ ಪ್ರೌಢಶಾಲೆಯ ಶಿಕ್ಷಕರೀಗ ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ.

ಔರಾದ ತಾಲೂಕಿನ ಸುಂದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯನಗುಂದಾ ಪ್ರೌಢಶಾಲೆ ಸ್ಥಿತಿಯಿದು. ಶಾಲೆಯ ಇನ್ನುಳಿದ ಶಿಕ್ಷಕರು ತಮಗೆ ತೊಂದರೆ ಕೊಡುತ್ತಿದ್ದಾರೆಂದು ಮುಖ್ಯ ಶಿಕ್ಷಕಿ ಸಂಗೀತಾ ಕಾಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸಂಗೀತಾ ಕಾಳೆಯವರು ಬಂದ ನಂತರ ಹಲವು ವಿವಾದಗಳು ಏಳುತ್ತಿವೆ. ಶಾಲೆಯಲ್ಲಿ ಶಿಕ್ಷಕರ ಭಿನ್ನಮತ, ಮನಸ್ತಾಪಗಳು ಹೆಚ್ಚಾಗಿದ್ದು, ಆರೋಪ ಪ್ರತ್ಯಾರೋಪಗಳು ಮೀತಿಮೀರಿವೆ. ಇದೇ ಕಾರಣಕ್ಕೆ ಶಾಲೆಯ ಪ್ರಕರಣವೀಗ ಪೊಲೀಸರ ಸಮ್ಮುಖದಲ್ಲಿದೆ.
ಯನಗುಂದಾ ಗ್ರಾಮಸ್ಥರಲ್ಲಿ ಕೆಲವರು ಮುಖ್ಯ ಶಿಕ್ಷಕಿ ಸಂಗೀತಾ ಕಾಳೆಯವರು ಬಂದಾಗಿನಿಂದ ಗೊಂದಲಗಳು ಹೆಚ್ಚಾಗಿವೆ. ತಿಂಗಳ ಹಿಂದೆ ಮಕ್ಕಳ ಬಿಸಿಯೂಟದ ಅಕ್ಕಿಯನ್ನ ಮಾರಾಟ ಮಾಡಿದ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಅವರು ನಮ್ಮೂರಿನ ಶಾಲೆಗೆ ಬೇಡವೇ ಬೇಡ ಎಂದಿದ್ದಾರೆ.