ಹುಬ್ಬಳ್ಳಿಯ ಮಾದರಿ ಪೊಲೀಸ್ “ಕಲ್”ಮೇಶ… ಮಾಡಿರುವ ಕೆಲಸ ನೋಡಿದ್ರೇ…!
1 min readಹುಬ್ಬಳ್ಳಿ: ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದುಕೊಂಡು ಕರ್ತವ್ಯ ನಿರ್ವಹಣೆ ಮಾಡುವವರ ಸಂಖ್ಯೆ ಸಾಕಷ್ಟಿದೆಯಾದರೂ, ಅದು ಎಲೆಮರೆ ಕಾಯಿಯಂತೆ ಗೋಚರವಾಗುವುದಿಲ್ಲ. ಆದರೆ, ಹುಬ್ಬಳ್ಳಿಯಲ್ಲಿ ಸಂಚಾರಿ ಠಾಣೆಯ ಪೊಲೀಸ್ ರೋರ್ವರು ಮಾಡಿರುವ ಕರ್ತವ್ಯದ ಭಾವಚಿತ್ರಗಳು ವೈರಲ್ ಆಗಿವೆ.
ಉತ್ತರ ಸಂಚಾರಿ ಪೊಲೀಸ್ ಠಾಣೆಯ ಕಲ್ಮೇಶ ಎಂಬುವವರು ಮಾಡಿದ ಕೆಲಸಗಳ ಭಾವಚಿತ್ರಗಳು ಅವರ ಬಗ್ಗೆ ತಿಳುವಳಿಕೆ ನೀಡುತ್ತಿವೆ. ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದ ಕಲ್ಲುಗಳನ್ನ ತಾವೇ ಸರಿಯಾಗಿ ಹೊಂದಿಸಿಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಹಳೇ ಬಸ್ ನಿಲ್ದಾಣ ಹಾಗೂ ಬಸವವನದ ಬಳಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ತಾತ್ಕಾಲಿಕ ಡಿವೈಡರ್ ಮಾಡಿದ್ದರೂ ಕೂಡಾ, ರಾತ್ರಿಯ ಸಮಯದಲ್ಲಿ ಕಿಡಗೇಡಿಗಳು ಡಿವೈಡರ್ ತೆಗೆದು ಬ್ಲಾಕ್ ಗಳನ್ನು ನಡು ರಸ್ತೆಯಲ್ಲಿಯೇ ಹಾಕಿ ರಾಂಗ್ ರೂಟ್ ನಲ್ಲಿ ಹೋಗುತ್ತಾರೆ. ಇದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ಕಲ್ಮೇಶ ಅವರು, ಖುದ್ದು ತಾವೇ ಬ್ಲಾಕ್ ಗಳನ್ನು ಹೊಂದಿಸಿಡುವ ಫೋಟೋಗಳಿಗೆ ವೈರಲ್ ಆಗಿದ್ದು, ಸಾರ್ವಜನಿಕರು ಸಂಚಾರಿ ಠಾಣೆಯ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.