‘ಛೋಟಾ ಮುಂಬೈ’ TO ‘ಬಡಾ ಮುಂಬೈ’ಗೆ ನಾಳೆಯಿಂದ ಬಸ್ ಸಂಚಾರ ಆರಂಭ
1 min readಹುಬ್ಬಳ್ಳಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಾರಿಗೆ ಬಸ್ ಸಂಚಾರ ಮತ್ತೆ ಆರಂಭಿಸಲಾಗಿದೆ. ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ವಿಜಯಪುರ ಹಾಗೂ ಚಿಕ್ಕೋಡಿ ಮಾರ್ಗವಾಗಿ ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ಸೋಲಾಪುರ, ಬಾರ್ಶಿ, ಪಂಡರಾಪುರ,ಔರಂಗಾಬಾದ್, ಈಚಲಕರಂಜಿ, ಮೀರಜ್ ಮತ್ತಿತರ ಸ್ಥಳಗಳಿಗೆ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ. ನಿಪ್ಪಾಣಿ- ಕೊಲ್ಲಾಪುರ ಮಾರ್ಗವಾಗಿ ಪುಣೆ,ಪಿಂಪ್ರಿ,ಮುಂಬೈ, ಬೊರಿವಿಲಿ,ಶಿರಡಿ ಮತ್ತಿತರ ಸ್ಥಳಗಳಿಗೆ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ವಾಕರಸಾಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಪ್ರತಿದಿನ 2 ವೋಲ್ವೋ, 4 ಎಸಿ ಸ್ಲೀಪರ್, 1 ರಾಜಹಂಸ ಹಾಗೂ 14 ವೇಗದೂತ ಸಾರಿಗೆಗಳು ಸೇರಿದಂತೆ ಒಟ್ಟು 21 ಬಸ್ಸುಗಳು ಮಹಾರಾಷ್ಟ್ರ ರಾಜ್ಯಕ್ಕೆ ಸಂಚರಿಸುತ್ತಿದ್ದವು. ಇವುಗಳೊಂದಿಗೆ ಹೊರಜಿಲ್ಲೆಗಳಿಂದ ಹುಬ್ಬಳ್ಳಿಯ ಮಾರ್ಗವಾಗಿ ನಿತ್ಯ 57 ಬಸ್ಸುಗಳು ಮಹಾರಾಷ್ಟ್ರ ರಾಜ್ಯಕ್ಕೆ ಸಂಚರಿಸುತ್ತಿದ್ದವು.
‘ಛೋಟಾ ಮುಂಬೈ’ ಖ್ಯಾತಿಯ ಹುಬ್ಬಳ್ಳಿಗರಿಗೂ ಮಹಾರಾಷ್ಟ್ರಕ್ಕೂ ಅವಿನಾಭಾವ ಸಂಬಂಧವಿದೆ. ಮುಂಬೈ, ಶಿರಡಿ, ಪಿಂಪ್ರಿ, ಪುಣೆ, ಬೊರಿವಿಲಿ, ಈಚಲಕರಂಜಿ, ಔರಂಗಾಬಾದ್, ಮೀರಜ್, ಸೋಲಾಪುರ, ಬಾರ್ಶಿ,ಪಂಡರಾಪುರ ಮತ್ತಿತರ ಸ್ಥಳಗಳಲ್ಲಿ ಬಹಳಷ್ಟು ಕನ್ನಡಿಗರಿದ್ದಾರೆ. ಈ ಸ್ಥಳಗಳ ನಡುವೆ ಸಂಚರಿಸುವ ಬಸ್ಸುಗಳು ಬರೀ ಸಾರಿಗೆ ಸಂಚಾರಕ್ಕಷ್ಟೇ ಸೀಮಿತವಾಗದೆ ಉಭಯ ರಾಜ್ಯಗಳ ಹಲವಾರು ಜನರ ಶಿಕ್ಷಣ,ಉದ್ಯೋಗ, ವಾಣಿಜ್ಯ,ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳ ಸಂಪರ್ಕ ಸೇತುವಾಗಿವೆ.
ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೆ ಹೋಗುವ ಬಸ್ಸುಗಳ ಸಮಯ ಹಾಗೂ ಮಾರ್ಗದ ವಿವರಗಳನ್ನು ಪ್ರತ್ಯೇಕವಾಗಿ ಅಡಕಗೊಳಿಸಿದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.