ವಾಸನೆ ಬರೋವರೆಗೂ ಕಾರಲ್ಲಿತ್ತು ತುಂಡು ತುಂಡು ಶವ….!

ಹುಬ್ಬಳ್ಳಿ: ನಗರ ಮತ್ತು ತಾಲೂಕು ಪ್ರದೇಶದಲ್ಲಿ ಸಿಕ್ಕಿದ್ದ ರುಂಡ ಮುಂಡ ಪ್ರಕರಣದ ಕೊಲೆ ನಡೆದಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯನಾಳದ ಬಳಿ ಎನ್ನುವ ಆತಂಕಕಾರಿ ಮಾಹಿತಿ ಸಿಕ್ಕಿದ್ದು, ಕೊಲೆ ಮಾಡಿದ ನಂತರ ಶವವನ್ನ ತಮ್ಮದೇ ಕಾರಿನಲ್ಲಿ ಮೂರು ದಿನಗಳವರೆಗೆ ಇಟ್ಟುಕೊಂಡು ಅಲೆದಾಡಿದ ಭಯಾನಕ ವಿವರವೂ ಹೊರಬಿದ್ದಿದೆ ಎಂದು ಕರ್ನಾಟಕವಾಯ್ಸ್.ಕಾಂಗೆ ಮೂಲಗಳಿಂದ ಗೊತ್ತಾಗಿದೆ.

ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ರುಂಡ ಸಿಕ್ಕಿದ್ದು ಹುಬ್ಬಳ್ಳಿಯ ವ್ಯಕ್ತಿ ಎನ್ನುವುದು ಖಚಿತಗೊಂಡಿದೆ. ಹತ್ಯೆ ಮಾಡುವ ಮುನ್ನ ಕೊಲೆಗಾರರು, ಸಾವನ್ನಪ್ಪಿದ ವ್ಯಕ್ತಿಗೆ ಕಂಠಪೂರ್ತಿ ಕುಡಿಸಿದ್ದಾರೆ. ನಂತರ ಆತನನ್ನ ರಾಯನಾಳದ ಬಳಿ ಕೊಲೆ ಮಾಡಿ, ಮೊದಲೇ ತಂದಿದ್ದ ಹರಿತವಾದ ಚಾಕುವಿನಿಂದ ಆತನ ದೇಹವನ್ನ ಫೀಸ್ ಫೀಸ್ ಮಾಡಿ, ಕಾರಿನಲ್ಲೇ ಹಾಕಿಕೊಂಡು ಮತ್ತೆ ಮನೆಗೆ ಮರಳಿದ್ದಾರೆ.

ಅಂದಿನಿಂದ ಬರೋಬ್ಬರಿ ಮೂರು ದಿನದ ನಂತರ ದೇಹದ ವಾಸನೆ ಬರತೊಡಗಿದ್ದರಿಂದ ಕತ್ತರಿಸಿದ ದೇಹದ ರುಂಡವನ್ನ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಬಳಿಯ ನಿರ್ಜನ ಪ್ರದೇಶದಲ್ಲಿ ಹಾಕಿ ಬೆಂಕಿ ಹಚ್ಚುತ್ತಾರೆ. ಅಲ್ಲಿಂದ ಮಧ್ಯಾಹ್ನವೇ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಸಂಸ್ಕಾರ ಶಾಲೆಯ ಸಮೀಪದಲ್ಲಿ ಕೈ-ಕಾಲು ಇಲ್ಲದ ದೇಹವನ್ನ ಮತ್ತೂ ಎರಡು ಕೈ, ಒಂದು ಕಾಲನ್ನ ಇನ್ನೂರು ಮೀಟರ್ ದೂರದಲ್ಲಿ ಹಾಕುತ್ತಾರೆ. ಅಷ್ಟೇ ಅಲ್ಲ, ಮತ್ತೊಂದು ಕಾಲನ್ನ ಎಲ್ಲಿ ಚೆಲ್ಲಿದ್ದಾರೆಂಬ ಮಾಹಿತಿಯನ್ನ ಇನ್ನೂ ಕಿರಾತಕರು ನೀಡಿಲ್ಲ.

ಪ್ರಕರಣ ನಡೆಯಲು ಕಾರಣವಾಗಿರುವ ವಿಷಯ ತೀರಾ ವಯಕ್ತಿಕವಾಗಿದೆ ಎಂದು ಹೇಳಲಾಗಿದೆ. ಇದೊಂದು ಭಯಾನಕ ಕೊಲೆ ಪ್ರಕರಣ ಮತ್ತೂ ಅಮಾನವೀಯ ಗುಣ ಹೊಂದಿದವರ ಕೃತ್ಯವೆಂದಷ್ಟೇ ಹೇಳಬಹುದಾಗಿದೆ.
ಪ್ರತಿಕ್ಷಣವೂ ವಿವಿಧ ರೀತಿಯ ಮಾಹಿತಿಗಳು ಹೊರಗೆ ಬೀಳುತ್ತಿದ್ದು, ರಾಕ್ಷಸ ರೂಪದ ಹತ್ಯೆಕೋರರಿಂದ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆಂದು ಹೇಳಲಾಗಿದೆ.