ಸಚಿವ ಮುನೇನಕೊಪ್ಪರ ಚಾಣಾಕ್ಷತನ- ಹೊರಬಿತ್ತು ವಂಚನೆ: ಮರಳಿತು ಲಕ್ಷ ಲಕ್ಷ ರೂಪಾಯಿ…

ಅಣ್ಣಿಗೇರಿ: ಓರ್ವ ಜನಪ್ರತಿನಿಧಿ ಎಷ್ಟೇ ಬಿಜಿಯಿದ್ದರೂ ತನ್ನ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನ ಅರಿತುಕೊಂಡು ಮುನ್ನಡೆಯುವವರು ತೀರಾ ವಿರಳ. ಆದರೆ, ತನ್ನ ಕ್ಷೇತ್ರದ ಜನರ ಹಣವನ್ನ ನುಂಗಿದ್ದರ ಬಗ್ಗೆ ಸಚಿವರೇ ಕಂಡು ಹಿಡಿದು ಹೊರ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು… ಎರಡೆರಡು ಜಿಲ್ಲೆಯ ಉಸ್ತುವಾರಿಯಿದ್ದರೂ ತಮ್ಮ ಮತಕ್ಷೇತ್ರದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದ ಹಾಗೇ ನೋಡಿಕೊಳ್ಳುತ್ತ ನಡೆದಿರುವುದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನ ನೋಡಿದ ಎಲ್ಲರಗೂ ಗೊತ್ತೆಯಿದೆ. ಈಗ ಯಾರಿಗೂ ಗೊತ್ತಾಗದ ಹಾಗೇ ನಡೆದಿದ್ದ ವಂಚನೆಯೊಂದನ್ನ ಸಚಿವರು ಆಸಕ್ತಿ ವಹಿಸಿದ್ದರಿಂದ ಸಂತ್ರಸ್ಥರಿಗೆ ಸೇರಬೇಕಾಗಿದ್ದ ಸುಮಾರು 40 ಲಕ್ಷ 55 ಸಾವಿರ 200ರೂಪಾಯಿ ಮರಳಿ ಖಜಾನೆ ಸೇರಿದೆ.
ಈ ಬಗ್ಗೆ ತಹಶೀಲ್ದಾರ ಮಂಜುನಾಥ ಅಮಾಸಿ ಮಾತಾಡಿದ್ದಾರೆ ಕೇಳಿ…
ನಡೆದ ಘಟನೆ ವಿವರ: ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿನಲ್ಲಿ ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿಯಂಬಂತೆ ಬಿಂಬಿಸಿ ಬರೋಬ್ಬರಿ 4055200 ರೂಪಾಯಿ ಹಣವನ್ನ ಲಪಟಾಯಿಸಿದ್ದಾನೆ.
ಇದನ್ನ ಯಾರೂ ಕಂಡು ಹಿಡದೇ ಇಲ್ಲ. ಆದರೆ, ಈ ಮಾಹಿತಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಅದೇಗೋ ಗೊತ್ತಾಗಿ, ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ತಹಶೀಲ್ದಾರ ಅಲರ್ಟ್ ಆಗಿ ಪರಿಶೀಲನೆ ನಡೆಸಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ. ತಕ್ಷಣವೇ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯಾವಾಗ ಎಫ್ಐಆರ್ ದಾಖಲಾಯಿತೋ, ತಕ್ಷಣವೇ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಸಂಬಂಧಿಕರು ಎಲ್ಲ ಹಣವನ್ನೂ ಸರಕಾರದ ಖಜಾನೆಗೆ ಮರಳಿಸಿದ್ದಾರೆ. ಆದರೆ, ಮಂಜುನಾಥ ನಾಪತ್ತೆಯಾಗಿದ್ದಾನೆ.
ಓರ್ವ ಸಚಿವ ರಾಜ್ಯದ ವಿವಿಧ ಪ್ರದೇಶದಲ್ಲಿ ಸಂಚರಿಸುತ್ತ ಸರಕಾರದ ಕೆಲಸಗಳನ್ನ ಮಾಡುತ್ತಿದ್ದಾಗಲೂ, ತನ್ನ ಕ್ಷೇತ್ರವನ್ನ ಹೇಗೆ ನೋಡಿಕೊಳ್ಳಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಸರಕಾರದ ಹಣ, ಯಾರಿಗೆ ತಲುಪಬೇಕೋ ಅವರಿಗೆ ತಲುಪಲಿ ಎಂಬ ಅವರ ಆಶೋತ್ತರ ಈ ಮೂಲಕ ಈಡೇರಿದೆ.