ಧಾರವಾಡ: “ಸರ್ವೇಯರ್ ಸಿದ್ಧನಗೌಡರ ಆಸ್ತಿ ಅಳತೆ ಮಾಡಲು ಬಂದ “ಲೋಕಾಯುಕ್ತ”: ಮುಂಜಾನೆಯೇ ಭ್ರಷ್ಟ ಅಧಿಕಾರಿಗೆ ಶಾಕ್..!”
ಧಾರವಾಡ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಭೂಮಾಪನ ಇಲಾಖೆಯ (ADLR) ಸರ್ವೇಯರ್ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಗುರುವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡವು ಇಂದು ಮುಂಜಾನೆಯೇ ಕಾರ್ಯಾಚರಣೆಗೆ ಇಳಿದಿದೆ. ಧಾರವಾಡದ ಭಾರತಿ ನಗರದ ಬಳಿಯಿರುವ ಲಕ್ಷೇಶ್ವರ ಗಾರ್ಡನ್ನಲ್ಲಿರುವ ಸೋಮಲಿಂಗಪ್ಪ ಅವರ ಐಷಾರಾಮಿ ಬಂಗಲೆ, ಮುರಗೋಡ್ನಲ್ಲಿರುವ ಅವರ ಹಳೆಯ ನಿವಾಸ ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿರುವ ಎ ಡಿ ಎಲ್ ಆರ್ (ADLR) ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಸೋಮಲಿಂಗಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ಖಚಿತ ಮಾಹಿತಿ ಹಾಗೂ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಅಧಿಕಾರಿಗಳು ಮನೆಯಲ್ಲಿರುವ ಚಿನ್ನಾಭರಣ, ನಗದು, ಆಸ್ತಿ ಪತ್ರಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸತತವಾಗಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯುತ್ತಿರುವುದು ಇತರ ಸರ್ಕಾರಿ ನೌಕರರಲ್ಲಿ ಆತಂಕ ಮೂಡಿಸಿದೆ. ದಾಳಿಯ ವೇಳೆ ಪತ್ತೆಯಾದ ಆಸ್ತಿಯ ಒಟ್ಟು ಮೌಲ್ಯದ ಕುರಿತು ತನಿಖೆಯ ನಂತರ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
