ಕರಣ್ ಸಂತೋಷ ಲಾಡ್ ಅವರ ಕೃತಿಯ ಕನ್ನಡುವಾದ ಪುಸ್ತಕ ಧಾರವಾಡದಲ್ಲಿ ಬಿಡುಗಡೆ…

ಕರಣ್ ಲಾಡ್ ಕೃತಿ “ಪ್ರತ್ಯನುಕರಣೆಯ ನ್ಯೂನತೆಗಳು” ಬಿಡುಗಡೆ
ತತ್ವಶಾಸ್ತ್ರದ ಗಹನ ವಿಷಯ ಚರ್ಚಿಸಿದ ಕೃತಿ
ಧಾರವಾಡ: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರ ಪುತ್ರ ಶ್ರೀ ಕರಣ್ ಲಾಡ್ ಅವರ ಪುಸ್ತಕ “ಪ್ರತ್ಯನುಕರಣೆಯ ನ್ಯೂನತೆಗಳು” (A Glitch in The Simulation ಕೃತಿಯ ಕನ್ನಡಾನುವಾದ) ಬಿಡುಗಡೆ ಸಮಾರಂಭ ಇಲ್ಲಿನ ರ್ನಾಟಕ ಮಹಾವಿದ್ಯಾಲಯದ ಸೃಜನಾ ರಂಗಮಂದಿರದಲ್ಲಿ ನಡೆಯಿತು.
ಕೃತಿಯನ್ನು ಪರಿಚಯಿಸಿದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ ಪಿ ರಮೇಶ ಅವರು ಅವರು ಮಾತನಾಡಿ, ಈ ಕೃತಿ ಏಳು ಅಧ್ಯಾಯಗಳನ್ನು ಒಳಗೊಂಡಿದೆ. ಗೌತಮ ಬುದ್ಧನ ಬಗ್ಗೆ ಹೆಚ್ಚಿನ ವಿವರಗಳಿವೆ. ನಿರಾಕರಣ ವಾದವೂ ಇದರಲ್ಲಿದೆ. ನೈತಿಕತೆ ಇದೆ. ತತ್ವಶಾಸ್ತ್ರದ ಐದೂ ಮುಖ ಪರಿಚಯಿಸಿದ್ದಾರೆ. ತತ್ವಶಾಸ್ತ್ರದ ಗಹನವಾದ ವಿಷಯಗಳನ್ನು ವಿವರಿಸಿದ್ದಾರೆ. ಚರ್ಚಿಸಿದ್ದಾರೆ. ಮಾನವೀಯ ಸಮಸ್ಯೆಗಳಿಗೆ ಪರಿಹಾರವನ್ನೂ ಸೂಚಿಸಿದ್ದಾರೆ. ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ನಿಲುವುಗಳು ಎಲ್ಲವನ್ನೂ ನೀಡಿದ್ದಾರೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಧಾರವಾಡದ ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ಮಾತನಾಡಿ, ಇದೊಂದು ಅಚ್ಚರಿಯ ಅಭಿವ್ಯಕ್ತಿಯ ಕೃತಿ, ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ. ಆದರೆ ಕರಣ್ ಅವರು ತತ್ವಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇದೊಂದು ಗಮನಾರ್ಹವಾದ ವಿಚಾರ ಎಂದರು.
ಬೈಲೂರು ನಿಷ್ಕಲಮಂಟಪದ ಶ್ರೀ ತೋಂಟದ ನಿಜಗುಣ ಮಹಾಪ್ರಭು ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಚಿತ್ತ ಸಮತೆ ಇರಬೇಕು. ಜನರಿಂದು ಭ್ರಮಾಲೋಕದಲ್ಲಿದ್ದಾರೆ. ತಾನು ಏನು ಎಂದು ಪ್ರಶ್ನಿಸಿಕೊಳ್ಳಬೇಕು. ಬಹಳಷ್ಟು ಜನರ ಅನುಕರಣೆಯಲ್ಲಿದ್ದಾರೆ. ಕಾಣುವ ಮನುಷ್ಯನನ್ನು ಪ್ರೀತಿ ಮಾಡದೆ ಕಾಣದ ದೇವರನ್ನು ಪ್ರೀತಿಸಲು ಸಾಧ್ಯವಿಲ್ಲ. ಇಂತಹ ಹಲವು ಅಂಶಗಳನ್ನುಈ ಕೃತಿ ವಿವರಿಸಿದೆ ಎಂದರು.
ಸಚಿವ ಸಂತೋಷ್ ಲಾಡ್ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ಜೆ, ಐ.ಜಿ.ಸನದಿ, ವಿನಾಯಕ ನಾಯಕ, ಎಂ.ಬಿ. ಕರಡೋಣಿ, ಸಮೀರ ಜೋಶಿ. ಅನುವಾದಕರಾದ ಡಾ. ವಿನಾಯಕ ನಾಯಕ ಮತ್ತು ಡಾ. ಲೋಹಿತ ನಾಯ್ಕರ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಕಲಾ ಮಹಾವಿದ್ಯಾಲಯ, ಸಂತೋಷ್ ಲಾಡ್ ಫೌಂಡೇಶನ್ ಮತ್ತು ಧಾರವಾಡ ಶರ್ವಿಲ್ ಪ್ರಕಾಶನ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.