‘ಕಲ್ಯಾಣ-ಕಂಟಕ’ ಶಿವಾನಂದ ವಾಲಿ-ಹುಬ್ಬಳ್ಳಿ,ಧಾರವಾಡದಲ್ಲಿಯೂ ಆಸ್ತಿ

ಬೆಳಗಾವಿ: ಸಂಗೀತ ನಿರ್ದೇಶಕ-ಪ್ರೇಮ ಕವಿಯಂದೇ ಖ್ಯಾತಿ ಪಡೆದಿರುವ ಕೆ.ಕಲ್ಯಾಣ ದಂಪತಿಗಳ ವಿಚ್ಚೇದನಕ್ಕೆ ಕಾರಣವಾಗಿದ್ದ ಶಿವಾನಂದ ವಾಲಿ ಎಂಬಾತ ಮಾಟ ಮಾಡುತ್ತಲೇ ಕಲ್ಯಾಣ ಕುಟುಂಬದಿಂದ ಸುಮಾರು ಐದಾರು ಕೋಟಿ ರೂಪಾಯಿಯ ಆಸ್ತಿಯನ್ನ ಕಬಳಿಕೆ ಮಾಡಿದ್ದಾನೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ಕಾನೂನು ಸುವ್ಯವಸ್ಥೆಯ ಡಿಸಿಪಿ ಡಾ.ವಿಕ್ರಮ್ ಆಮಟೆ, ಪ್ರೇಮಕವಿ, ಸಾಹಿತಿ ಕೆ.ಕಲ್ಯಾಣ ದಾಂಪತ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆಯಲ್ಲಿ ವಂಚನೆ ಮತ್ತು ಅಪಹರಣ ದೂರು ದಾಖಲಿಸಿದ ಪರಿಣಾಮ ಗಡ್ಡೇಕರ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿ ಕಲ್ಯಾಣ ಅವರ ಪತ್ನಿ ಹಾಗೂ ಅವರ ಕುಟುಂಬದರಿಂದ ಶಿವಾನಂದ ವಾಲಿಯನ್ನ ವಶಕ್ಕೆ ಪಡೆದು ಕೆ. ಕಲ್ಯಾಣ ಅವರ ಕುಟುಂಬಕ್ಕೆ ವಂಚಿಸಿದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಐದಾರು ಕೋಟಿಯಷ್ಟು ಕಬಳಿಕೆ ಮಾಡಿಕೊಂಡಿದ್ದನ್ನ ಬಾಯಿ ಬಿಟ್ಟಿದ್ದಾನೆಂದು ತಿಳಿಸಿದರು.
ಮಾಳಮಾರುತಿ ಠಾಣೆಯ ಸಿಪಿಐ ನೇತೃತ್ವದಲ್ಲಿ 9 ಮ್ಯಾಕ್ಸಿಕ್ಯಾಬ್, 350 ಗ್ರಾಂ ಚಿನ್ನ, 6 ಕೆ.ಜಿ. ಬೆಳ್ಳಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ ನಗರ ಸೇರಿದಂತೆ ಐದರಿಂದ ಆರು ಕೋಟಿ ರೂಪಾಯಿ ಆಸ್ತಿಯನ್ನ ಶಿವಾನಂದ ವಾಲಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆಂದು ಹೇಳಿದರು.
ಗಂಗಾ ಕುಲಕರ್ಣಿ ಅವರನ್ನು ಮನೆಗೆ ಕಳುಹಿಸಿ ಅವರ ಪತಿಯಿಂದಲೇ ಅವರ ಪತ್ನಿಗೆ ಕಂಟಕ ಇದೆ ಎಂದು ಪೂಜೆ ಮಾಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣವನ್ನ ಶಿವಾನಂದ ವಾಲಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಅಲ್ಲದೆ, ವಾಲಿ ಮೈ ಮೇಲೆ ದೇವರು ಬರುತ್ತದೆ ಎಂದು ಅವರ ಆಸ್ತಿ ಲಪಟಾಯಿಸಿದ್ದಾರೆ. ಇನ್ನೂ ತನಿಖೆ ಹಂತದಲ್ಲಿದ್ದು ಇನ್ನೆಷ್ಟು ಆಸ್ತಿ ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದರು. ಸಾರ್ವಜನಿಕರು ಇಂಥ ಮಾಟ ಮಂತ್ರ ಎಂದು ಅನುಮಾನ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು. ಮಾಳಮಾರುತಿ ಸಿಪಿಐ ಬಿ.ಆರ್.ಗಡ್ಡೇಕರ್ ಉಪಸ್ಥಿತರಿದ್ದರು.