ಕಲಘಟಗಿಯ ಜಿನ್ನೂರಲ್ಲಿ ಜೀವ ಬೆದರಿಕೆ…!

ಧಾರವಾಡ: ತಮ್ಮನ್ನ ಹೊಡೆದು, ಸಾರ್ವಜನಿಕವಾಗಿ ಎಳೆದಾಡಿ, ಜೀವ ಬೆದರಿಕೆ ಹಾಕಿದ್ದಾರೆಂದು ನ್ಯಾಯಾಲಯದ ಮೂಲಕ ಖಾಸಗಿ ದೂರನ್ನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಪ್ಐಆರ್ ದಾಖಲಾಗಿದೆ.
ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಚೆನ್ನಬಸಪ್ಪ ಫಕ್ಕೀರಪ್ಪ ವಾಲಿಕಾರ, ಯಲ್ಲವ್ವ ನೀಲಪ್ಪ ಉಪ್ಪಲಿ ಹಾಗೂ ರತ್ನವ್ವ ಮೈಲಾರಿ ಸುಣಗಾರ ಮನೆಯಲ್ಲಿದ್ದಾಗ, ಅದೇ ಗ್ರಾಮದ ಶರೀಫ ಸಿದ್ಧಪ್ಪ ವಾಲಿಕಾರ ಮತ್ತು ಆತನೊಂದಿಗೆ ಒಂಬತ್ತು ಜನರು ಬಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಾಗಿದೆ.
ಜಿನ್ನೂರು ಗ್ರಾಮದಲ್ಲಿಯೇ ಚೆನ್ನವ್ವಾ ವಾಲಿಕಾರ ಎಂಬುವವರಿಗೆ ಅವಾಚ್ಯವಾಗಿ ಬೈಯ್ದು, ಹೊಡೆದದ್ದಲ್ಲದೇ ಬಿಡಿಸಲು ಬಂದವರನ್ನ ಥಳಿಸಿದ್ದಾರೆ. ಮಹಿಳೆಯನ್ನ ಹೊರಗೆ ಎಳೆದುಕೊಂಡು ಬಂದು ಸೀರೆಯನ್ನ ಎಳೆದಾಡಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ.
ನ್ಯಾಯಾಲಯದ ಮೂಲಕ ಬಂದಿರುವ ದೂರನ್ನ ದಾಖಲು ಮಾಡಿಕೊಂಡಿರುವ ಕಲಘಟಗಿ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.