ಮರಳಿ ಗೂಡಿಗೆ : ಜಾರ್ಖಂಡ್ ಮೂಲದ 69 ಹೋಟೆಲ್ ಕಾರ್ಮಿಕರಿಗೆ ಬಸ್ ವ್ಯವಸ್ಥೆ

ಹುಬ್ಬಳ್ಳಿ: ಅವಳಿ ನಗರದ ಹೋಟೆಲ್ ಹಾಗೂ ವಿವಿಧ ತಿಂಡಿ ತಿನಿಸು ತಯಾರಿಕಾ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 69 ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ರಾಜ್ಯ ಸರ್ಕಾರದಿಂದ ವಲಸೆ ಕಾರ್ಮಿಕರಿಗೆ ಉಚಿತವಾಗಿ ಅವರ ರಾಜ್ಯಗಳಿಗೆ ತರಳಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಂಗಳೂರಿನಿಂದ ವಿಶೇಷ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನ ಮೂಲಕ ಜಾರ್ಖಂಡ್ಗೆ ತೆರಳಲಿದ್ದಾರೆ.
ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಬೆಳಗಿನ ಉಪಹಾರವನ್ನು ನೀಡಿ, ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಿಸಲಾಗಿದೆ. ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರತಿ ಬಸ್ನಲ್ಲಿ 23 ರಿಂದ 24 ಜನರಂತೆ ಒಟ್ಟು 3 ವಾಯುವ್ಯ ಕರ್ನಾಟಕ ಬಸ್ಗಳಲ್ಲಿ ಇವರನ್ನು ಸಾಮಾಜಿಕ ಅಂತರದೊಂದಿಗೆ ಕುಳ್ಳಿರಿಸಿ ಕಳುಹಿಸಿಕೊಡಲಾಗಿದೆ. ಮಧ್ಯಹ್ನಾದ ಊಟ ಹಾಗೂ ನೀರಿನ ವವ್ಯಸ್ಥೆ ಮಾಡಲಾಗಿದೆ. ಪ್ರತಿ ಬಸ್ನಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು ಬೆಂಗಳೂರಿನಿಂದ ಇವರನ್ನು ಜಾರ್ಖಂಡ್ಗೆ ಕಳುಹಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾ.ಕ.ರ.ಸಾ.ಸಂ.ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್, ಕಾರ್ಮಿಕ ನಿರೀಕ್ಷಕರುಗಳಾದ ಅಕ್ರಂ, ಅಶೋಕ್ ಒಡಯರ್, ಸಾರಿಗೆ ಇಲಾಖೆಯ ಐ.ಜಿ.ಮಗಾಮಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.